ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಾಗೂ ಕೆಲವೆಡೆ ಪ್ರವಾಹ ಉಂಟಾಗಿದ್ದರಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಅಪಾರ ಹಾನಿಯಾಗಿದೆ. 175.04 ಹೆಕ್ಟೇರ್ ತೋಟಗಾರಿಕೆ ಬೆಳೆ, 23,238 ಹೆಕ್ಟೇರ್ ಕೃಷಿ ಬೆಳೆಗಳಿಗೆ ಹಾನಿಯಾಗಿದೆ.
ಅಂದಾಜು 301 ರೈತರ, ₹175.35 ಲಕ್ಷ ಮೌಲ್ಯದ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈರುಳ್ಳಿ 50 ಹೆಕ್ಟೇರ್, ಒಣ ಮೆಣಸಿನಕಾಯಿ 40, ಹಸಿಮೆಣಸಿನಕಾಯಿ 36, ಟೊಮೆಟೊ 15.2, ಹೂವಿನ ಬೆಳೆ 16.8, ಪೇರಲ 2, ಬಾಳೆಹಣ್ಣು 15.4 ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವನರ ‘ಪ್ರಜಾವಾಣಿ’ಗೆ ತಿಳಿಸಿದರು.
ಮೆಕ್ಕೆಜೋಳ 3,846.82, ಸೋಯಾಬಿನ್ 3,046.62, ಹೆಸರು 11,278, ಶೇಂಗಾ 1,579, ಹತ್ತಿ 1,868, ಉದ್ದು 240, ತೊಗರಿ 30, ಭತ್ತ 671.54, ಕಬ್ಬು 487, ಇತರೆ 192 ಹೆಕ್ಟೇರ್ ಕೃಷಿ ಬೆಳೆಗಳಿಗೆ ಹಾನಿ ಉಂಟಾಗಿರುವುದನ್ನು ಅಂದಾಜಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಐ.ಬಿ.ರಾಜಶೇಖರ್ ತಿಳಿಸಿದರು.
ಅತಿಯಾದ ಮಳೆ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಬೆಣ್ಣೆಹಳ್ಳ, ತುಪ್ಪರಿಹಳ್ಳ ಉಕ್ಕಿ ಹರಿದು ಹಲವೆಡೆ ಪ್ರವಾಹ ಉಂಟಾಗಿದೆ. ತಗ್ಗು ಪ್ರದೇಶದ ಜಮೀನು, ತೋಟಗಳಲ್ಲಿ ನೀರು ನಿಂತ ಪರಿಣಾಮ ಹಲವೆಡೆ ಬೆಳೆಗಳು ಜಲಾವೃತವಾಗಿವೆ.
ವಾಡಿಕೆಗಿಂತ ಹೆಚ್ಚು ಸುರಿದ ಮಳೆ: ಜಿಲ್ಲೆಯಲ್ಲಿ ಈ ಬಾರಿ ಜುಲೈನಲ್ಲಿ 126.03 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ 171.02 ಮಿ.ಮೀ ಮಳೆ ಸುರಿದಿದೆ. ಇದು ವಾಡಿಕೆಗಿಂತ ಶೇ 36ರಷ್ಟು ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದರು.
‘ಹಾನಿಗೊಳಗಾದ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ ₹6,800, ನೀರಾವರಿ ಆಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ ₹13,500 ಹಾಗೂ ದೀರ್ಘ ಕಾಲದ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ ₹18,000 ಪರಿಹಾರ ಸಿಗಲಿದೆ. ಹಾನಿಯ ಸಂಪೂರ್ಣ ವರದಿ ಬರಬೇಕಿದೆ’ ಎನ್ನುತ್ತಾರೆ ಅಧಿಕಾರಿಗಳು.