ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನವಲಗುಂದ | ನಿರಂತರ ಮಳೆ: ಒಡೆದ ಒಡ್ಡು, ಹಾನಿ

ಅಬ್ದುಲರಝಾಕ ನದಾಫ್
Published 10 ಜೂನ್ 2024, 5:56 IST
Last Updated 10 ಜೂನ್ 2024, 5:56 IST
ಅಕ್ಷರ ಗಾತ್ರ

ನವಲಗುಂದ: ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಮಳೆಯು ಸರಿಯಾಗಿ ಆಗದೇ ತೊಂದರೆ ಪಟ್ಟಿದ್ದ ರೈತ ಸಮೂಹ ಅಲ್ಪ ಮಳೆಗೆ ತನ್ನ ಕೃಷಿ ಚಟುವಟಿಕೆ ಮಾಡುತ್ತಿತ್ತು. ಈಗ ನಾಲ್ಕೈದು ದಿನಗಳಿಂದ ಸುರಿದ ಭಾರಿ ಮಳೆಗೆ ವಿಧಾನಸಭಾ ಕ್ಷೇತ್ರದಾದ್ಯಂತ ಹೊಲಗಳಲ್ಲಿ ಒಡ್ಡು ಒಡೆದಿದ್ದು, ಬಿತ್ತನೆ ಮಾಡಿದ ಹೊಲಗಳಲ್ಲಿ ಹಾನಿಯಾಗಿದೆ.

ಮಳೆ ಮುಂಗಾರು ಬಿತ್ತನೆಗೆ ಬಹಳ ಅನುಕೂಲವಾಗಿದೆ. ಮುಂಗಾರು ಬೆಳೆಗಳಾದ ಹೆಸರು, ಹತ್ತಿ, ಮೆಕ್ಜೆಜೋಳ, ಮೆಣಸಿನಕಾಯಿ, ಈರುಳ್ಳಿ ಬೀಜ ಬಿತ್ತಲು ರೈತರು ಮುಂದಾಗಿದ್ದರಿಂದ ಜಮೀನಿನ ಬದುವಿನ ಕಡೆಗೆ ಅಷ್ಟಾಗಿ ಲಕ್ಷ್ಯ ವಹಿಸದಿರುವ ಒಂದು ಕಾರಣ ಎನ್ನಲಾಗಿದೆ.

ಬಿತ್ತನೆ ಮಾಡಿದ ಜಮೀನಿನಲ್ಲಿ ಮಣ್ಣು ಕೊಚ್ಚಿ ಹೋಗಿ ಅಲ್ಲಿ ಕೇವಲ ರೇವೆ ಮಣ್ಣು ತುಂಬಿ ಬಿತ್ತಿದ ಬೀಜ ಮೊಳಕೆ ಒಡೆದು ಹುಟ್ಟಿದ ಹೆಸರು ಪಸಲು ನಾಶವಾಗಿವೆ. ಪುನಃ ರೈತರು ಮತ್ತೆ ಜಮೀನನ್ನು ಹದ ಮಾಡುವುದು ಅನಿವಾರ್ಯವಾಗಿದೆ

ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಹೊಲಗಳಲ್ಲಿರುವ ಬದುವು, ಒಳಗಟ್ಟಿ, ಹಾಗೂ ಒಡ್ಡುಗಳು ಕಿತ್ತು ಹೊಗಿವೆ. ಸರಕಾರವು ಹಾಳಾದ ಒಡ್ಡುಗಳನ್ನು ಸರಿಪಡಿಸಲು ಪರಿಹಾರ ನೀಡಬೇಕೆಂದು ರೈತ ಮುಖಂಡ ಸಂತೋಷ ಚವಡಿ ಆಗ್ರಹಿಸಿದ್ದಾರೆ.

‘ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಮಾಹಿತಿ ಪ್ರಕಾರ ಸುಮಾರು 86 ಹೇಕ್ಟರ್ ಪ್ರದೇಶದಲ್ಲಿ ಒಣಬೆಸಾಯಿ ಜಮೀನಿದೆ. ಅದರಲ್ಲಿ ಈ ಮುಂಗಾರು ಮಳೆಗೆ ಅಂದಾಜು 25 ಸಾವಿರ ಹೇಕ್ಟರ್ ಹೆಸರು ಮತ್ತು ಹತ್ತಿ ಬಿತ್ತನೆಯಾಗಿದೆ‘ ಎಂದು ನವಲಗುಂದ ಸಹಾಯಕ ಕೃಷಿ ನಿರ್ದೇಶಕರಾದ ತಿಪ್ಪೇಸ್ವಾಮಿ.ವಿ ತಿಳಿಸಿದ್ದಾರೆ

ನಿರಂತರ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಕೆಲ ಮನೆಗಳಿಗೆ ಹಾನಿಯಾಗಿದೆ. ಒಡ್ಡುಗಳು ಒಡೆದು ಬಿತ್ತಿದ ಜಮೀನಿನಲ್ಲಿ ಹಾನಿಯಾಗಿರುವ ಕುರಿತು ಪರಿಶೀಲಿಸಲಾಗುವುದು
ಮಲ್ಲಿಕಾರ್ಜುನ ಹೆಗ್ಗಣ್ಣವರ ತಹಶೀಲ್ದಾರ್ ನವಲಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT