ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮೂರು ದಿನ ಗಣೇಶೋತ್ಸವ ಆಚರಿಸಲು ಅನುಮತಿ ಪಡೆದಿರುವ ಗಜಾನನ ರಾಣಿ ಚನ್ಮಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಸದಸ್ಯರು, ಪೊಲೀಸರ ವಿರೋಧದ ಮಧ್ಯೆಯೇ ಪೆಂಡಾಲ್ ಎದುರಿನ ದ್ವಾರದಲ್ಲಿ ವಿ.ಡಿ. ಸಾವರ್ಕರ್, ಭಗತ್ ಸಿಂಗ್, ಶಿವಾಜಿ ಭಾವಚಿತ್ರವಿರುವ ಫ್ಲೆಕ್ಸ್ ಅಳವಡಿಸಿದರು.
ಇದರೊಂದಿಗೆ ಅನುಮತಿ ನೀಡುವಾಗ ಪಾಲಿಕೆ ನೀಡಿದ್ದ ಷರತ್ತನ್ನು ಮಹಾಮಂಡಳಿ ಉಲ್ಲಂಘಿಸಿದೆ. ಇದಕ್ಕೂ ಮುಂಚೆ ಸಾವರ್ಕರ್ ಮತ್ತು ಬಾಲಗಂಗಾಧರ ತಿಲಕ್ ಅವರಿರುವ ಭಾವಚಿತ್ರವನ್ನೊಳಗೊಂಡ ಮಹಾಮಂಡಳಿಯ ಬ್ಯಾನರ್ ಹಾಕಲು ಮುಂದಾಗಿದ್ದಾಗ, ಪೊಲೀಸರು ತಡೆದಿದ್ದರು. ನಂತರ, ಸದಸ್ಯರು ಬ್ಯಾನರ್ ಮಡಿಚಿಟ್ಟಿದ್ದರು. ಇದಾದ ಒಂದು ಗಂಟೆಯ ಬಳಿಕ ಸದಸ್ಯರು ಗೇಟ್ ಹಾಗೂ ಸುತ್ತಮುತ್ತ ಭಾವಚಿತ್ರಗಳನ್ನು ಅಳವಡಿಸಿದ್ದಾರೆ.
ಷರತ್ತಿನಲ್ಲಿ ಏನಿದೆ: ಅನುಮತಿಯೊಂದಿಗೆ ಪಾಲಿಕೆ ವಿಧಿಸಿರುವ ಒಂಬತ್ತು ಷರತ್ತುಗಳಲ್ಲಿ, ಗಣೇಶ ಮೂರ್ತಿಯನ್ನು ಬಿಟ್ಟು ಸ್ಥಳದಲ್ಲಿ ಬೇರಾವುದೇ ಮೂರ್ತಿ, ಫ್ಲೆಕ್ಸ್, ಭಾವಚಿತ್ರ ಹಾಗೂ ಜಾಹೀರಾತನ್ನು ಪ್ರದರ್ಶಿಸುವಂತಿಲ್ಲ. ಹೀಗಿದ್ದರೂ, ಮಹಾಮಂಡಳಿ ಷರತ್ತು ಉಲ್ಲಂಘಿಸಿದೆ.