ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘಟನೆ, ಸ್ವಾವಲಂಬನೆಯತ್ತ ಹೆಜ್ಜೆ ಇಡಿ’

‍ಪ್ರಶಸ್ತಿ ಪ್ರದಾನ, ವಿಚಾರ ಸಂಕಿರಣದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಡಾ.ಲತಾ ಮುಳ್ಳೂರ ಕರೆ
Last Updated 31 ಜನವರಿ 2022, 2:57 IST
ಅಕ್ಷರ ಗಾತ್ರ

ಕಲಬುರಗಿ: ‘ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಶೇ 50ಕ್ಕೂ ಹೆಚ್ಚು ಮಹಿಳಾ ನೌಕರರೇ ಇದ್ದಾರೆ. ಆದರೆ, ಅವರಲ್ಲಿ ಸಂಘಟನೆ ಇಲ್ಲದ ಕಾರಣ ಶಕ್ತಿ ಪ್ರದರ್ಶಿಸಲು ಆಗುತ್ತಿಲ್ಲ’ ಎಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಡಾ.ಲತಾ ಮುಳ್ಳೂರ ಬೇಸರ ವ್ಯಕ್ತಪಡಿಸಿದರು.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ, ವಿವಿಧ ಪ್ರಶಸ್ತಿಗಳ ಪ್ರದಾನ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳಾ ನೌಕರರಲ್ಲಿ ಸಂಘಟನೆ ಇಲ್ಲದ ಕಾರಣ ಅವರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕೊರತೆ ನೀಗಿಸುವ ಸಲುವಾಗಿ ಶಿಕ್ಷಕಿಯರ ಸಂಘವನ್ನು ಕಟ್ಟಿದ್ದು, ರಾಜ್ಯದಾದ್ಯಂತ ಬೆಳೆಸಲಾಗುತ್ತಿದೆ’ ಎಂದರು.

‘ಶಿಕ್ಷಕಿಯರ ಸಂಘಟನೆ ಕಟ್ಟಿರುವುದಕ್ಕೆ ಕೆಲವು ಪುರುಷರು, ನೌಕರರ ಸಂಘಟನೆಯ ಮುಖಂಡರು ಇಲ್ಲಸಲ್ಲದ ಮಾತನಾಡಿದರು. ನಮ್ಮ ಸಂಘಟನೆಯನ್ನು ತುಳಿಯುವ ಪ್ರಯತ್ನ ಮಾಡಿದರು. ಅವರ ಹೊರತಾಗಿಯೂ ಹಲವು ಪುರುಷ ನೌಕರರು ನಮಗೆ ಬೆಂಬಲ ನೀಡಿದ್ದಾರೆ. ಮಹಿಳೆಯರು ಸ್ವಾವಲಂಬಿ ಆಗುವುದು, ಸ್ವತಂತ್ರ ಆಲೋಚನೆ ಮಾಡುವುದೇ ತಪ್ಪು ಎನ್ನುವ ಮನೋಭಾವ ಸರ್ಕಾರಿ ನೌಕರರಲ್ಲೂ ಇರುವುದು ಖೇದಕರ ಸಂಗತಿ. ಎಲ್ಲ ವಿರೋಧಿಗಳ ನಡೆವೆಯೂ ನಾವು ಬೆಳೆಯಬೇಕು. ವಿರೋಧ ಮಾಡುವವರಿಗೆ ತಕ್ಕಪಾಠ ಕಲಿಸಬೇಕು. ಇದಕ್ಕಾಗಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು’ ಎಂದೂ ಅವರು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಡಿಡಿಪಿಐ ಅಶೋಕ ಭಜಂತ್ರಿ ಮಾತನಾಡಿ, ‘ಪುರುಷರೇ ಪ್ರಧಾನ ಪಾತ್ರ ವಹಿಸುತ್ತಿರುವ ಇಂದಿನ ದಿನಗಳಲ್ಲಿ ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಹೋರಾಡುವುದು ಬಹಳ ಅಗತ್ಯ. ಈ ದಿಸೆಯಲ್ಲಿ ಶಿಕ್ಷಕಿಯರ ಸಂಘವು ಹೊಸ ಆಶಾಭಾವ ಮೂಡಿಸಿದೆ’ ಎಂದರು.

‘ಶಿಕ್ಷಣ ಇಲಾಖೆಯಲ್ಲಿ ಸುಧಾರಣೆಯ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂಬ ಭ್ರಮೆ ಬಹಳ ಜನರಲ್ಲಿದೆ. ಆದರೆ, ಅದು ನಿಜವಾಗಿ ಇರುವುದು ಶಿಕ್ಷಕ– ಶಿಕ್ಷಕಿಯರ ಕೈಯಲ್ಲಿ. ಗುಣಮಟ್ಟದ ಶಿಕ್ಷಣ, ಸುಧಾರಣೆ, ವ್ಯಕ್ತಿತ್ವ ವಿಕಸನ, ಪರಿವರ್ತನೆ, ಸಾಧನೆ ಹೀಗೆ ಎಲ್ಲ ಆಯಾಮಗಳಲ್ಲೂ ಶಿಕ್ಷಕರೇ ಮಕ್ಕಳನ್ನು ಪ್ರೇರೇಪಿಸಬೇಕು. ಬದಲಾಗುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ನೈತಿಕ ಸ್ಥೈರ್ಯ ನೀಡುವುದು ಮುಖ್ಯ’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸೇವಂತಾ ಚವಾಣ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಡಾ.ಶಾಂತಾ ಅಷ್ಟಗಿ ವಿಶೇಷ ಉಪನ್ಯಾಸ ನೀಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರೆಮ್ಮ ಡವಳಗಿ, ಬಸವಂತಬಾಯಿ ಅಕ್ಕಿ, ಉಪಾಧ್ಯಾಯರ ಪ್ರಗತಿಪರ ಸಂಘದ ಅಧ್ಯಕ್ಷ ಗುರುಪಾದ ಕೋಗನೂರ, ಸಂಘದ ಮುಖಂಡರಾದ ಹೇಮಾ ದೊಡ್ಡಣ್ಣನವರ, ನಂದಿನಿ ಸನಬಾಲ್‌, ಎಚ್.ಜ್ಯೋತಿ, ಮಲ್ಲಮ್ಮ ಮತ್ತಿಮಡು, ಸುಧಾ ಬಿರಾದಾರ ಇದ್ದರು. ಶಿಕ್ಷಕಿ ಸಾವಿತ್ರಿ ಪಾಟೀಲ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕಿ ಎನ್.ರೇಣುಕಾ ಕಾರ್ಯಕ್ರಮ ನಿರೂಪಿಸಿದರು.

*

ವಿವಿಧ ಪ್ರಶಸ್ತಿ ಪ್ರದಾನ

ಕಲಬುರಗಿ ದಕ್ಷಿಣ ಕ್ಷೇತ್ರಶಿಕ್ಷಣಾಧಿಕಾರಿ ಶಂಕ್ರೆಮ್ಮ ಢವಳಗಿ ಮತ್ತು ಆಳಂದ ಕ್ಷೇತ್ರಶಿಕ್ಷಣಾಧಿಕಾರಿ ಬಸಂತಬಾಯಿ ಅಕ್ಕಿ ಅವರಿಗೆ ‘ಶಿಕ್ಷಣ ರತ್ನ’ ಪ್ರಶಸ್ತಿ, ಚಂದ್ರಶೇಖರ ಕರಜಗಿ ಅವರಿಗೆ ‘ಸಮಾಜ ಸೇವಾರತ್ನ’ ಪ್ರಶಸ್ತಿ ನೀಡಲಾಯಿತು.

ವಿದ್ಯಾಧರ ಸಿಂದಗಿ, ಗುರುಲಿಂಗಪ್ಪ ಹುಳಗೇರಿ, ಸಿದ್ಧಲಿಂಗ ಲಾಳಸೇರಿ, ರಾಘವೇಂದ್ರ ಕೋದಂಪುರ, ಸಂತೋಷಕುಮಾರ ಕೋಟನೂರ, ಮೂಸಾ ಪಾನಪರೋಶ, ಶ್ರೀನಿವಾಸ ಕುಲಕರ್ಣಿ, ಜಗನ್ನಾಥ ಹೊಳಕುಂದಾ, ದತ್ತ ಬಡಿಗೇರ, ಭೀಮಾಶಂಕರ ಬಿರಾಳ, ಅಮ್ಜದ್ ಹುಸೇನಿ, ರಮೇಶ ರಾಠೋಡ ಅವರಿಗೆ ‘ಜ್ಯೋತಿಬಾ ಫುಲೆ’ ಪ್ರಶಸ್ತಿ ಹಾಗೂ ಕೈಸರ್ ಸುಲ್ತಾನ, ಮಲ್ಲಮ್ಮ ಮಾಡ್ಯಾಳ, ಜಗದೇವಿ ಗಣಾಪುರ, ರೇಣುಕಾ ಬಳೂಂಡಗಿ, ನಾಗಲಾಂಬಿಕಾ ಸೊನ್ನಕಾಂಬಳೆ, ಬಸವರಾಜೇಶ್ವರಿ, ವಚನರಶ್ಮಿ, ಛಾಯಾ ಪರಮೇಶ್ವರ, ವಾಣಿಶ್ರೀ ಚಂದ್ರಕಾಂತ, ಸುರೇಖಾ, ವಿಜಯದೇವಿ ಲೋಖರೆ, ವಿದ್ಯಾ ಕುಲಕರ್ಣಿ ಅವರಿಗೆ ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT