ಭಾನುವಾರ, ಏಪ್ರಿಲ್ 2, 2023
23 °C

ಹುಬ್ಬಳ್ಳಿ: ಲಾಠಿಚಾರ್ಜ್ ಖಂಡಿಸಿ ಸುವರ್ಣಸೌಧ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: 'ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕಾಗಿ ವಿವಿಧ ಸಂಘಟನೆಗಳು ಬೆಂಗಳೂರಿನಲ್ಲಿ ಡಿ. 12ರಂದು ಹಮ್ಮಿಕೊಂಡಿದ್ದ ಹೋರಾಟವನ್ನು ಹತ್ತಿಕ್ಕಲು ಪೊಲೀಸರು ನಡೆಸಿದ್ದ ಲಾಠಿಚಾರ್ಜ್ ಖಂಡಿಸಿ ಬೆಳಗಾವಿಯ ಚಳಿಗಾಲ ಅಧಿವೇಶನದ ಸಂದರ್ಭ ಸುವರ್ಣಸೌಧ ಮುತ್ತಿಗೆ ಹಾಕಲಾಗುವುದು' ಎಂದು ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದ ಮುಖಂಡ ಗುರುನಾಥ ಉಳ್ಳಿಕಾಶಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಲಾಠಿಚಾರ್ಜ್ ಮಾಡಿದ ಹಾಗೂ ಅದರ ಹಿಂದಿರುವ ಅಧಿಕಾರಿಗಳನ್ನು 24 ಗಂಟೆಗಳ ಒಳಗೆ ಅಮಾನತು ಮಾಡಬೇಕು. ಇಲ್ಲದಿದ್ದರೆ ಎಲ್ಲ ಸಚಿವರ ಪ್ರತಿಕೃತಿ ದಹಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು' ಎಂದು ಎಚ್ಚರಿಸಿದರು.

'ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸರ್ಕಾರ ಉಪಸಮಿತಿ ರಚನೆ ಮಾಡಿದೆ. ಉಪಸಮಿತಿ ರಚನೆಯಾಗುವುದೇ ಕಾಲಹರಣ ಮಾಡಲು. ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ನಾಟಕ ಮಾಡುವ ಬದಲು, ಆಯೋಗದ ವರದಿ ಅನುಷ್ಠಾನಕ್ಕೆ ಅಧಿವೇಶನದಲ್ಲಿ ಶಿಫಾರಸ್ಸು ಮಾಡಬೇಕು. ಈ ಕುರಿತು ಅಧಿವೇಶನ ಪೂರ್ವ ಸರ್ಕಾರ ಭರವಸೆ ನೀಡಬೇಕು. ಇಲ್ಲದಿದ್ದರೆ ಅಧಿವೇಶನದ ಸಂದರ್ಭದಲ್ಲಿ ರಾಜ್ಯದಾದ್ಯಂತ ಬೆಳಗಾವಿ ಚಲೋ ಹಮ್ಮಿಕೊಂಡು ಪ್ರತಿಭಟನೆ ನಡೆಸಲಾಗುವುದು. ಪ್ರತಿ ಮನೆಯಿಂದ ಒಬ್ಬೊಬ್ಬರು ಪಾಲ್ಗೊಳ್ಳಲಿದ್ದಾರೆ' ಎಂದು ತಿಳಿಸಿದರು.

ಫಕ್ಕಣ್ಣ ದೊಡ್ಡಮನಿ, ರೇವಣಸಿದ್ದಪ್ಪ ಹೊಸಮನಿ, ದೇವೇಂದ್ರಪ್ಪ ಇಟಗಿ, ಶಾಂತರಾಜ ಪೋಳ, ಪ್ರಭು ಪ್ರಭಾಕರ, ಶ್ರೀನಿವಾಸ ಬೆಳದಡಿ, ಲೋಹಿತ್ ಗಾಮನಗಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು