ವೀರಭದ್ರೇಶ್ವರ ದೇವರ ಸಂಭ್ರಮದ ಜಾತ್ರೆ

ಕಲಘಟಗಿ: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ರಥೋತ್ಸವ ಭಾನುವಾರ ಅದ್ಧೂರಿಯಿಂದ ನಡೆಯಿತು.
ಕಲಘಟಗಿಯ ಹನ್ನೆರಡು ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹೊಸದಾಗಿ ದೀಪಮಾಲಿ ಕಂಬ ಸ್ಥಾಪನೆ, ಕಳಸಾರೋಹಣ ಕಾರ್ಯಕ್ರಮ ಜರುಗಿತು. ನಂತರ ಅಭಿಷೇಕ, ಅಗ್ನಿಕುಂಡ, ಪಲ್ಲಕ್ಕಿ ಉತ್ಸವ, ಕುಂಭ ಮೇಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿವಿಧ ಪವಾಢ ಪ್ರದರ್ಶನ ಮಾಡುತ್ತ ಪುರವಂತರು ಸಾಗಿದರು.
ಮಹಿಳೆಯರು ಹಾಗೂ ಮಕ್ಕಳು ಅಗ್ನಿಕೊಂಡ ಹಾಯ್ದು ಸಾಗಿದರು. ಪುರವಂತರ ನೇತೃತ್ವದಲ್ಲಿ ವಿಧಿ ವಿಧಾನದ ಮೂಲಕ ಹಿತ್ತಾಳೆ, ಕಬ್ಬಿಣದ ಸಲಾಕೆ ಹಾಗೂ ದಾರದ ಮೂಲಕ ಶಸ್ತ್ರ ಹಾಕಿಸಿಕೊಂಡರು. ಭಕ್ತಾದಿಗಳು ಹರಕೆ ತೀರಿಸಿದರು.
ರಥೋತ್ಸವ ಸಾಗುತ್ತಿದ್ದಂತೆ ನೂರಾರು ಭಕ್ತರು ಬಾಳೆಹಣ್ಣು, ಉತ್ತತ್ತಿ ಎಸೆದು ಕೈ ಮುಗಿದರು. ನಂತರ ತೊಟ್ಟಿಲು ಸೇವೆ ಸಲ್ಲಿಸಿದ ಎಲ್ಲರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಹಿರಿಯ ದಿವಾಣಿ ನ್ಯಾಯಾಧೀಶ ಜಿ.ಆರ್ ಶೆಟ್ಟರ್, ಬಿಜೆಪಿ ಮುಖಂಡ ಶಶಿಧರ ನಿಂಬಣ್ಣವರ, ವೈ.ಬಿ ದಾಸನಕೊಪ್ಪ, ಗೋವಿಂದಪ್ಪ ಭೋವಿ, ಕೆ.ಟಿ ಚಿಕ್ಕಾಡಿ, ಈಶ್ವರ ಜವಳಿ ಹಾಗೂ ಗ್ರಾಮಸ್ಥರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.