ಧಾರವಾಡ: ‘ವಜಾಗೊಂಡು ಕಳೆದ 30 ದಿನಗಳಿಂದ ಸತ್ಯಾಗ್ರಹ ನಡೆಸುತ್ತಿರುವ 358 ಜಲಮಂಡಳಿ ನೌಕರರನ್ನು ಮುಂದಿನ ಎರಡು ತಿಂಗಳಲ್ಲಿ ಹಂತ ಹಂತವಾಗಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು ಎಂಬ ಶಾಸಕ ಅರವಿಂದ ಬೆಲ್ಲದ ಅವರ ಭರವಸೆಯಂತೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ’ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ತಿಳಿಸಿದರು.
‘ಪಾಲಿಕೆ ಕಚೇರಿ ಎದುರು ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕ ಅರವಿಂದ ಬೆಲ್ಲದ, ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ನಂತರ ಪಾಲಿಕೆ ಆಯುಕ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ನೌಕರರ ಮರುನಿಯೋಜನೆ ಮಾಡುವಂತೆ ತಿಳಿಸಿದರು. ಆಯುಕ್ತರು ಸ್ಪಂದಿಸಿದ್ದರಿಂದ, ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಜತೆಗೆ ತಕ್ಷಣವೇ ಬಾಕಿ ಇರುವ ನಾಲ್ಕು ತಿಂಗಳ ವೇತನ ನೀಡುವುದಾಗಿಯೂ ತಿಳಿಸಿದ್ದಾರೆ’ ಎಂದರು.
ಮಂಗಳವಾರ ಬೆಳಿಗ್ಗೆ ಪಾಲಿಕೆ ಆಯುಕ್ತ ಡಾ. ಬಿ.ಗೋಪಾಲಕೃಷ್ಣ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ, 82 ಜನರನ್ನು ಸೇರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಪ್ರಸ್ತಾವನೆ ತಿರಸ್ಕರಿಸಿದ ಕೊರವರ, ಸೇರಿಸಿಕೊಂಡರೆ ಎಲ್ಲರನ್ನೂ ಸೇರಿಸಿಕೊಳ್ಳಿ. ಇಲ್ಲವಾದಲ್ಲಿ ಸತ್ಯಾಗ್ರಹ ಮುಂದುವರಿಯಲಿದೆ ಎಂದಿದ್ದರು.
ಪಾಲಿಕೆಯ ವಿರೋಧ ಪಕ್ಷಗಳ ಸದಸ್ಯರು, ಕಾಂಗ್ರೆಸ್ ಮುಖಂಡರು ಧರಣಿಯಲ್ಲಿ ಪಾಲ್ಗೊಂಡು ನೌಕರರನ್ನು ಬೆಂಬಲಿಸಿದರು.
ಸಂಜೆ ಭೇಟಿ ನೀಡಿದ ಅರವಿಂದ ಬೆಲ್ಲದ, ನೌಕರರಿಗೆ ಎಳನೀರು ಕುಡಿಸಿದರು. ಆ ಮೂಲಕ ನೌಕರರು ಸತ್ಯಾಗ್ರಹ ಕೊನೆಗೊಳಿಸಿದರು.