ಹುಬ್ಬಳ್ಳಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಧವೆಯು ಅದೇ ಜಾತಿಯ ಪುರುಷನನ್ನು ಪುನರ್ವಿವಾಹವಾದಾಗ ಸರ್ಕಾರವು ಪ್ರೋತ್ಸಾಹಧನದ ರೂಪದಲ್ಲಿ ₹3 ಲಕ್ಷ ನೀಡುತ್ತದೆ. ಆದರೆ, ಈ ಯೋಜನೆ ಬಗ್ಗೆ ಬಹುತೇಕ ಜನರಿಗೆ ಮಾಹಿತಿ ಇಲ್ಲ. ಅನುದಾನದ ಕೊರತೆಯಿಂದ ಹಲವರಿಗೆ ಪ್ರೋತ್ಸಾಹ ಧನವೂ ಸಿಕ್ಕಿಲ್ಲ.
ಸಮಾಜಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, 2015–16 ರಿಂದ 2023–24ನೇ ಸಾಲಿನವರೆಗೆ ಪ್ರೋತ್ಸಾಹಧನಕ್ಕಾಗಿ ರಾಜ್ಯದ 513 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 336 ಮಂದಿಗಷ್ಟೇ ಪ್ರೋತ್ಸಾಹಧನ ಸಿಕ್ಕಿದೆ.
‘ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಗ್ರಾಮಗಳಲ್ಲಿ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ವಿಧವಾ ಪುನರ್ವಿವಾಹ ಯೋಜನೆಯಡಿ ಅರ್ಜಿ ಸಲ್ಲಿಕೆ ಪ್ರಮಾಣ ಕಡಿಮೆ. ಹೆಚ್ಚಿನ ಮಂದಿ ಮತ್ತೆ ಮದುವೆ ಆಗದ ಕಾರಣ ಅಥವಾ ಮದುವೆ ಮಾಡಿಕೊಂಡರೂ ಹೇಳಿಕೊಳ್ಳಲು ಹಿಂಜರಿಯುವ ಕಾರಣ ಅರ್ಜಿ ಸಲ್ಲಿಕೆ ಪ್ರಮಾಣ ಕಡಿಮೆ ಆಗಿರಬಹುದು’ ಎಂದು ಸಮಾಜ ಕಲ್ಯಾಣ ಇಲಾಖೆಯ ಧಾರವಾಡದ ಸಹಾಯಕ ನಿರ್ದೇಶಕಿ ಎಂ.ಬಿ. ಸಣ್ಣೇರ ಮಾಹಿತಿ ನೀಡಿದರು.
‘ನಿಯಮದಲ್ಲಿ ಸೂಚಿಸಿದ್ದಕ್ಕಿಂತ ಅರ್ಜಿದಾರರ ವಯಸ್ಸು, ಆದಾಯ ಹೆಚ್ಚಾಗಿದ್ದಲ್ಲಿ ಪ್ರೋತ್ಸಾಹಧನಕ್ಕೆ ಅರ್ಜಿ ಪರಿಗಣಿಸಲ್ಲ’ ಎಂದರು.