ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಕುಸುಗಲ್- ಹಳಿಯಾಳ ಗ್ರಾಮದ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಕುಸುಗಲ್ ರೈತ ಸೇವಾ ಸಂಘದ ಮುಖಂಡ ಜಿ.ಪಿ.ಕೆಂಚನಗೌಡ್ರ, `ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ' ಎಂದರು.
`ಸದ್ಯ ಇರುವ ಆರು ಕಿ.ಮೀ ಉದ್ದದ ಕುಸುಗಲ್- ಹಳಿಯಾಳ ರಸ್ತೆ ಕೇವಲ 400 ಮೀಟರ್ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿಗಳಾದ 63 ಮತ್ತು 64ರವರೆಗೆ ಜೋಡಿಸಲು ಹುಬ್ಬಳ್ಳಿ ಹೊರವಲಯದಲ್ಲಿ 12 ಕಿ.ಮೀ ಉದ್ದದ 12 ಕಿ.ಮೀ ಉದ್ದ, 200 ಅಡಿ ಅಗಲದಲ್ಲಿ ಬೈಪಾಸ್ ಮಾಡಲು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ವಿಭಾಗದಿಂದ ಭೂ ಸ್ವಾಧೀನಕ್ಕೆ ಮುಂದಾಗಿದೆ.
ಆದರೆ ಇದೇ ರಸ್ತೆಯ ಮೂರು ಕಿ. ಮೀ ಹಂತದಲ್ಲಿ ಮೂರು ಬೈಪಾಸ್ ರಸ್ತೆಗಳು ಸೇರುತ್ತಿದ್ದು, ಪ್ರತ್ಯೇಕವಾಗಿ ರಸ್ತೆ ನಿರ್ಮಾಣದ ಯೋಜನೆ ಅವೈಜ್ಞಾನಿಕವಾಗಿದೆ' ಎಂದರು.
`ಈಗಿರುವ ಕುಸುಗಲ್ - ಹಳಿಯಾಳ ರಸ್ತೆಗೆ ಮತ್ತೆ 6 ಕಿ.ಮೀ ರಸ್ತೆ ಮಾಡಿದರೆ ಬೈಪಾಸ್ ರಸ್ತೆಗೆ ಸೇರಿಕೊಳ್ಳಲಿದ್ದು, ಇದರಿಂದ ರೈತರ ಭೂಮಿ ಉಳಿದಂತಾಗುತ್ತದೆ' ಎಂದು ಅಭಿಪ್ರಾಯಪಟ್ಟರು.
`ಭೂಮಿ ಸ್ವಾಧೀನಪಡಿಸಿಕೊಳ್ಳುವ ಉದ್ದೇಶದ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿಗಳ ಕುಮ್ಮಕ್ಕು ಇರುವ ಸಂಶಯವಿದೆ. ಯಾವುದೇ ಕಾರಣಕ್ಕೂ ಭೂಮಿ ಬಿಟ್ಟು ಕೊಡದಿರಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೂ ಸಿದ್ಧ' ಎಂದು ಅವರು ತಿಳಿಸಿದರು. ಟಿ.ಎಸ್.ಚವನಗೌಡ್ರ, ಶಿವಣ್ಣ ಹೊಸಮನಿ, ಶಂಕರಗೌಡ ಪಾಟೀಲ, ಎಸ್. ನರಗುಂದ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.