ಚನ್ನಪಟ್ಟಣ: ‘ಜಾನಪದ ಕಲಾವಿದರು ಹೊರ ದೇಶಗಳಲ್ಲಿ ಸಂಸ್ಕೃತಿ ಸೊಗಡು ಬಿತ್ತುತ್ತಿದ್ದು, ಅಲ್ಲಿ ನಮ್ಮ ಕಲೆ ಎಲ್ಲರ ಮೆಚ್ಚುಗೆಗೆ ಪಾತ್ರಾಗಿದೆ’ ಎಂದು ಸಾಹಿತಿ ಎಲೆಕೇರಿ ಶಿವರಾಂ ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣದ ಮಂಟೇಸ್ವಾಮಿ ಮಠದಲ್ಲಿ ಘನನೀಲಿ ಸಿದ್ದಪ್ಪಾಜಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಾನಪದ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದದ ಮೂಲ ಹುಡುಕಲು ಹೊರಟರೆ ದೊಡ್ಡ ಇತಿಹಾಸವೇ ಸಿಗುತ್ತದೆ. ಜನರಿಂದ ಹುಟ್ಟಿದ ಪದ ಜಾನಪದವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.
ಮಂಟೇಸ್ವಾಮಿ ಮಠದ ಅಧ್ಯಕ್ಷ ಸಿ.ಎಂ.ಶಿವರಾಮಯ್ಯ ಮಾತನಾಡಿ, ಜಾನಪದ ದೇವರೆನಿಸಿಕೊಂಡ ಸಿದ್ದಪ್ಪಾಜಿ, ಮಂಟೇಸ್ವಾಮಿ ಇಂದಿನ ವಾಸ್ತವಿಕ ಸನ್ನಿವೇಶದಲ್ಲೂ ತಮ್ಮ ಪವಾಡ, ಹಾಡುಗಳ ಮೂಲಕ ಜನಮಾನಸದಲ್ಲಿ ಬೇರು ಬಿಟ್ಟಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಸಿದ್ದರಾಜು ಮಾತನಾಡಿ, ಜಾನಪದ ಕಲಾವಿದರು ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಜಾನಪದಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಅವರಿಗೆ ಸರ್ಕಾರದಿಂದ ಸೂಕ್ತ ಧನಸಹಾಯ ಸಿಗಬೇಕಾಗಿದೆ ಎಂದು ತಿಳಿಸಿದರು.
ಮಂಟೇಸ್ವಾಮಿ ಮಠದ ಗುರು ಲಕ್ಷ್ಮಣ್ ಸಿಂಗ್ ಇದ್ದರು. ಜಾನಪದ ತಂಡಗಳಾದ ರಾಂಪುರ ಸಿದ್ದರಾಜು, ಸ್ವಾಮಿ ಮೆಣಸಿಗನಹಳ್ಳಿ, ಬೋರಮ್ಮ, ಎಚ್.ಪುಟ್ಟರಾಜು, ಕೆ.ಎಚ್.ಕುಮಾರ್, ಬಸವರಾಜು ಗುರುವಿನಪುರ, ನಿರಂಜನ್ ಮತ್ತು ತಸ್ಮಿಯ ಗೀತಗಾಯನ ನಡೆಸಿಕೊಟ್ಟರು.