ಮುಂಡರಗಿ: ‘ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ನಿತ್ಯ ಎದುರಾಗುತ್ತಿದ್ದ ಅವಮಾನಗಳನ್ನೆಲ್ಲ ಸಹಿಸಿಕೊಂಡು, ಸದಾ ಅಧ್ಯಯನಶೀಲರಾಗಿ ಮುಂದೆ ಜಗದ್ವಿಖ್ಯಾತರಾದರು. ಅವಮಾನಗಳನ್ನೆ ಸನ್ಮಾನಗಳ ಮೆಟ್ಟಿಲುಗಳನ್ನಾಗಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ’ ಎಂದು ಸಾಮರಸ್ಯ ವೇದಿಕೆಯ ಜಿಲ್ಲಾ ಸಂಯೋಜಕ ಹನುಮಂತ ಕಾಳೆ ತಿಳಿಸಿದರು.
ತಾಲ್ಲೂಕು ಸಾಮರಸ್ಯ ವೇದಿಕೆಯು ಶನಿವಾರ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವೇಶ್ವರರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
21ನೇ ಶತಮಾನದಲ್ಲಿದ್ದೇವಾದರೂ ದೇಶದ ಕೆಲವು ಭಾಗಗಳಲ್ಲಿ ಈಗಲೂ ತಾರತಮ್ಯ ಜಾರಿಯಲ್ಲಿದೆ. ದೇಶದಲ್ಲಿ ಮನೆಮಾಡಿರುವ ಜಾತಿ ಹಾಗೂ ಮತ್ತಿತರ ತಾರತಮ್ಯಗಳನ್ನು ಹೋಗಲಾಡಿಸಲು ಸಾಮರಸ್ಯ ವೇದಿಕೆ ಶ್ರಮಿಸುತ್ತಿದೆ. ನಾವೆಲ್ಲ ಒಂದು ಎಂಬ ಭಾವ ಎಲ್ಲರಲ್ಲಿ ಮೂಡಿದಾಗ ಮಾತ್ರ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ ಎಂದು ತಿಳಿಸಿದರು.
ಸಮಾಜ ಸೇವಕ ಮಂಜುನಾಥ ಇಟಗಿ ಮಾತನಾಡಿ, ದೇಶದ ಎಲ್ಲ ಕ್ಷೇತ್ರಗಳಲ್ಲಿ ದಮನಿತರ ಉದ್ಧಾರಕ್ಕಾಗಿ ಡಾ.ಅಂಬೇಡ್ಕರ್ ಅವರು ಸದಾ ಶ್ರಮಿಸಿದರು. ಬಸವಣ್ಣ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳು ಒಂದೆ ಆಗಿದ್ದವು ಎಂದು ತಿಳಿಸಿದರು.
ಕಾಶೀನಾಥ ಬಿಳಿಮಗ್ಗದ ಅಧ್ಯಕ್ಷತೆ ವಹಿಸಿದ್ದರು. ದೇವೇಂದ್ರಪ್ಪ ರಾಮೇನಹಳ್ಳಿ, ಶಿವು ವಾಲಿಕಾರ ಮಾತನಾಡಿದರು.
ಸಮಾಜ ಸೇವಕ ದೇವೇಂದ್ರಪ್ಪ ರಾಮೇನಹಳ್ಳಿ, ನಿವೃತ್ತ ಪೌರ ಕಾರ್ಮಿಕರಾದ ನೀಲಮ್ಮ ಹರಿಜನ, ರಂಗಕಲಾವಿದ ಶಿವು ವಾಲಿಕಾರ, ಗಾಯಕಿ ನಯನಾ ಅಳವುಂಡಿ ಅವರನ್ನು ಸನ್ಮಾನಿಸಲಾಯಿತು.