ಗದಗ: ‘ಯುವ ಕಲಾವಿದ ರವಿ ಎಚ್.ಕೆ. ತಮ್ಮ ಭಾವನೆಗಳಿಗೆ ಬಣ್ಣ ತುಂಬಿ ಅತ್ಯುತ್ತಮ ಕಲಾಕೃತಿಗಳನ್ನು ರಚಿಸಿದ್ದಾರೆ. ಚಿತ್ರಕಲೆಯ ಬಗ್ಗೆ ಅವರಿಗಿರುವ ಒಳನೋಟ ಅವರ ಕಲಾಕೃತಿಗಳಲ್ಲಿ ಗೋಚರಿಸುತ್ತದೆ’ ಎಂದು ಗದಗ- ಬೆಟಗೇರಿ ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀಧರ ಧರ್ಮಾಯತ ಹೇಳಿದರು.
ನಗರದ ಟಿ.ಪಿ.ಅಕ್ಕಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಲ್ಲಿ ಕಲಾವಿದ ರವಿ ಎಚ್.ಕೆ. ಆಯೋಜಿಸಿದ್ದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
‘ರವಿ ಅವರ ಕಲಾಕೃತಿಗಳಲ್ಲಿ ಸೃಜನಶೀಲತೆ ಕಾಣಿಸುತ್ತದೆ. ಅಪರೂಪ ಹಾಗೂ ಅಪ್ರತಿಮವಾದ ಕಲಾಕೃತಿಗಳು ಅವರ ಕುಂಚದಿಂದ ಮೂಡಿಬಂದಿವೆ. ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ ಫ್ಲೆಕ್ಸ್ಗಳ ಹಾವಳಿ ಮಧ್ಯೆಯೂ ರವಿ ಅವರಂತಹ ಯುವ ಕಲಾವಿದರು ಕಲಾಲೋಕದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಕಲಾವಿದರಿಗೆ ರೋಟರಿ ಸಂಸ್ಥೆ ಸದಾ ಸಹಕಾರ ನೀಡಲಿದೆ’ ಎಂದು ಹೇಳಿದರು.
ಮುಖ್ಯ ಅತಿಥಿ ಡಾ. ಉಮೇಶ ಹಾದಿ ಮಾತನಾಡಿ, ‘ನಿಸರ್ಗದ ಸೊಬಗು ಬಿಂಬಿಸುವ ಕಲಾಕೃತಿಗಳು ರವಿ ಅವರ ಸೃಜನಶೀಲತೆಯನ್ನು ಎತ್ತಿ ತೋರಿಸುತ್ತವೆ’ ಎಂದರು.
ವಿಜಯ ಆರ್ಟ್ ಇನ್ಸ್ಟಿಟ್ಯೂಟ್ನ ಪ್ರಾಚಾರ್ಯ ವಿಲ್ಸನ್ ಎಸ್. ಸೋನಘರ್ ಮಾತನಾಡಿ, ‘ಕಲಾವಿದ ರವಿ ವಿಜಯ ಕಲಾ ಮಂದಿರದ ಹಳೆ ವಿದ್ಯಾರ್ಥಿ. ಸೃಜನಶೀಲ ಕಲಾಕೃತಿಗಳ ರಚನೆಯಲ್ಲಿ ತನ್ನದೇ ಆದ ತಂತ್ರಗಾರಿಕೆ ಹೊಂದಿದ್ದಾರೆ. ಅವರ ಕಲಾಕೃತಿಗಳನ್ನು ಪ್ರದರ್ಶನ ಮಾಡಿದ್ದು ಹರ್ಷ ತಂದಿದೆ’ ಎಂದು ಹೇಳಿದರು.
ವಿಜಯ ಕಲಾಮಂದಿರ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಟಿ. ಅಕ್ಕಿ, ಪ್ರಾಚಾರ್ಯ ಸಿ.ವಿ.ಬಡಿಗೇರ, ರೋಟರಿ ಸಂಸ್ಥೆಯ ಪದಾಧಾಕಾರಿಗಳಾದ ಶ್ರೀಧರ ಸುಲ್ತಾನಪೂರ, ಉಪನ್ಯಾಸಕರಾದ ಕೃಷ್ಣ ಕೆ.ಎಂ., ಶರಣಪ್ಪ ಬಿ.ಎಚ್., ಎಸ್.ವಿ. ಗುಂಜಾಳ, ವಿ.ಬಿ. ಪರ್ವತಗೌಡರ, ಎಸ್.ಎಸ್. ಕಮ್ಮಾರ ಇದ್ದರು.