ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮತ್ತೆ ವಿಧಾನಸಭಾ ಚುನಾವಣೆ ನಡೆಯಲಿದೆ: ಬೊಮ್ಮಾಯಿ

ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿಕೆ
Published 24 ಏಪ್ರಿಲ್ 2024, 15:39 IST
Last Updated 24 ಏಪ್ರಿಲ್ 2024, 15:39 IST
ಅಕ್ಷರ ಗಾತ್ರ

ಡಂಬಳ: ದೇಶದಲ್ಲಿ ಮಹಿಳೆಯರಿಗೆ ಅರಿಷಿಣ, ಕುಂಕುಮ, ವಿಭೂತಿ ಉಳಿಯಬೇಕಾದರೆ ಬಿಜೆಪಿ ಬೆಂಬಲಿಸಿ. ದೇಶದ ಅಭಿವೃದ್ಧಿ ಹಾಗೂ ಸುರಕ್ಷತೆಯ ದೃಷ್ಠಿಯಿಂದ ಮೋದಿ ಆಡಳಿತ ಅನಿವಾರ್ಯವಾಗಿದೆ. ಕಾಂಗ್ರೆಸ್ ಪಕ್ಷದ ರಾಹುಲ್‍ ಗಾಂಧಿ ಅಸಮರ್ಥ ನಾಯಕ’ ಎಂದು ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಡಂಬಳ ಗ್ರಾಮದ ತೋಂಟದಾರ್ಯ ಕಲಾಭವನದಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ 543 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ನಿಲ್ಲಿಸಲೂ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಒಂದು ವರ್ಷದ ಅವಧಿಯೊಳಗೆ ವಿಧಾನಸಭಾ ಚುನಾವಣೆ ನಡೆಯಲಿದ್ದು ಪಕ್ಷದ ಮುಖಂಡರು ವಿಧಾನಸಭಾ ಚುನಾವಣೆಗೆ ಸಿದ್ಧರಾಗುವಂತೆ  ಬಸವರಾಜ ಬೊಮ್ಮಾಯಿ ಕರೆ ನೀಡಿದರು.

‘ಪರಿಶಿಷ್ಟರು, ಹಿಂದುಳಿದ ವರ್ಗದವರ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಮೋಸ ಮಾಡಿದೆ. ಅಕ್ಕಿ ನಮ್ಮ ಪಕ್ಷದ್ದು, ಭಾಗ್ಯ ಮಾತ್ರ ಅವರದು. ನಾನು ನೀರಾವರಿ ಮಂತ್ರಿಯಾಗಿದ್ದಾಗ ಮತ್ತು ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದ ಶಿಂಗಟಾಲೂರ ಏತನೀರಾವರಿ ಯೋಜನೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಗೆ ಸಾವಿರಾರು ಅನುದಾನ ನೀಡಿ ಯೋಜನೆಯನ್ನು ಪೂರ್ಣಗೊಳಿಸಿದ್ದರಿಂದ ರೈತರ ಜಮೀನುಗಳಿಗೆ ನೀರು ಹರಿಯುತ್ತಿದೆ’ ಎಂದರು.

‘ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿಯು ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನದ ಸಂಖ್ಯೆಯನ್ನು ಕಾಂಗ್ರೆಸ್ ಪಕ್ಷ ಪಡೆಯುವುದಿಲ್ಲ.  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಹಿಂದೂಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿದೆ. ಪೊಲೀಸ್ ಠಾಣೆಯಲ್ಲಿ ರೌಡಿಗಳಿಗೆ ರಾಜಮರ್ಯಾದೆ ದೊರೆಯುತ್ತಿದೆ’ ಎಂದು ಆರೋಪಿಸಿದರು.

‘ನೇಹಾ ಹತ್ಯೆ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ನೋಡಬೇಕು. ಆದರೆ ಮಂತ್ರಿಯೊಬ್ಬರು ಮತಬ್ಯಾಂಕ್‌ಗಾಗಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವುದು ದುರ್ದೈವ’ ಎಂದು ಬೊಮ್ಮಾಯಿ ಕಾಂಗ್ರೆಸ್ ಪಕ್ಷದ ಆಡಳಿತವನ್ನು ಖಂಡಿಸಿದರು.

ಜೆಡಿಎಸ್ ಪಕ್ಷದ ಮುಖಂಡ ಬಂಡೇಪ್ಪ ಖಾಶಂಪೂರ ಮಾತನಾಡಿ, ‘ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಕುರುಬ ಸಮುದಾಯ ಬಿಜೆಪಿಯನ್ನು ಬೆಂಬಲಿಸಿ, ಮೋದಿಯನ್ನು ಪ್ರಧಾನಿಯಾಗಿಸಬೇಕು’ ಎಂದರು.

ಕುಷ್ಟಗಿ ಶಾಸಕ ದೊಡ್ಡಮಗೌಡ ಪಾಟೀಲ, ನಿವೃತ್ತ ಐಎಎಸ್ ಅಧಿಕಾರಿ ಸಿ. ಸೋಮಶೇಖರ, ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ ಮಾತನಾಡಿದರು.

ಡಂಬಳ ಮಂಡಳ ಅಧ್ಯಕ್ಷ ರವಿ ಕರಿಗಾರ, ಮುಖಂಡರಾದ ಭೀರಪ್ಪ ಎಸ್ ಬಂಡಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಎಂ.ಎಸ್.ಕರಿಗೌಡರ, ರವಿ ದಂಡಿನ, ಕರಬಸಪ್ಪ ಹಂಚನಾಳ, ಮುದಕಪ್ಪ ಕುಲಕರ್ಣಿ, ಮಲ್ಲಪ್ಪ ಮಠದ, ಚನ್ನವೀರಯ್ಯ ಸಾಲಿಮಠ, ಭೀಮಸಿಂಗ್ ರಾಠೋಡ, ವೆಂಕನಗೌಡ ಪಾಟೀಲ, ವಿ.ಬಿ ಹಳ್ಳಿಕೇರಿ, ಶಿವಪ್ಪ ಅಂಕದ, ಡಿ.ಪ್ರಸಾದ, ನಿಂಗಪ್ಪ ಮಾದರ, ಹನಮಂತಪ್ಪ ಹಾದಿಮನಿ, ಈಶ್ವರಪ್ಪ ರಂಗಪ್ಪನವರ ಇದ್ದರು. ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಪಕ್ಷದ ಮುಖಂಡರು ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ನಾಲ್ಕು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಡಿಕೆಶಿ ವಿರುದ್ಧ ಹರಿಹಾಯ್ದ ಬಂಡಿ

‘ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಓಡಿಸುತ್ತಾರೆ ಎಂದು ಭಯ ಹುಟ್ಟಿಸುತ್ತಿದ್ದಾರೆ. ಇಡೀ ವಿಶ್ವದಲ್ಲಿ ಮುಸ್ಲಿಮರು ನೆಮ್ಮದಿ ಮತ್ತು ಸುರಕ್ಷತೆಯಿಂದ ಇರುವುದು ಭಾರತದಲ್ಲಿ ಮಾತ್ರ. ಕ್ರೈಸ್ತರು ಮುಸ್ಲಿಮರಿಗೆ ವಾಸ ಮಾಡಲು ಹಲವು ರಾಷ್ಟ್ರಗಳಿವೆ. ಆದರೆ ಹಿಂದೂಗಳಿಗೆ ಭಾರತ ಮಾತ್ರ ಇದೆ ಎನ್ನುವುದನ್ನು ಡಿ.ಕೆ.ಶಿವಕುಮಾರ ಅರ್ಥಮಾಡಿಕೊಳ್ಳಬೇಕು’ ಎಂದು ಮಾಜಿ ಶಾಸಕ ಕಳಕಪ್ಪ ಬಂಡಿ ಡಿಕೆಶಿ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT