ಶಿರಹಟ್ಟಿ: ಲಾಕ್ ಡೌನ್ ಘೋಷಣೆ ಇದ್ದರೂ, ಇದನ್ನು ನಿರ್ಲಕ್ಷಿಸಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆದ ವರ್ತಕರಿಗೆ ತಹಶೀಲ್ದಾರ್ ಯಲ್ಲಪ್ಪ ಗೋಣ್ಣೆಣನವರ ಮಂಗಳವಾರ ಬಿಸಿ ಮುಟ್ಟಿಸಿದರು. ಲಾಠಿ ಹಿಡಿದು ರಸ್ತೆಗಿಳಿದ ಅವರು, ಅಂಗಡಿಗಳ ಬಾಗಿಲು ಮುಚ್ಚಿಸಿ, ವ್ಯಾಪಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಬೆಳಿಗ್ಗೆ ಹೂವು, ಹಣ್ಣು, ತರಕಾರಿ ಅಂಗಡಿಗಳ ಬಾಗಿಲು ತೆರೆಯಲಾಗಿತ್ತು. ಗ್ರಾಹಕರು ಖರೀದಿಗೆ ಮುಗಿಬಿದ್ದಿದರು. ಪೊಲೀಸರು ಮತ್ತು ಪಟ್ಟಣ ಪಂಚಾಯ್ತಿ ಸಿಬ್ಬಂದಿ ಅಂಗಡಿ ಬಾಗಿಲುಗಳನ್ನು ಮುಚ್ಚಿಸಲು ಹರಸಾಹಸ ಪಟ್ಟರು. ಕೆಲವು ವ್ಯಾಪಾರಿಗಳು ಅಮಾವಾಸ್ಯೆ ಪೂಜೆ ಸಲ್ಲಿಸುವ ನೆಪದಲ್ಲಿ ವಹಿವಾಟು ನಡೆಸಲು ಮುಂದಾದರು. ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಲಾಠಿ ಕೈಗೆತ್ತಿಕೊಂಡು ಗಾಂಧಿ ವೃತ್ತದಲ್ಲಿರುವ ದಿನಸಿ ಅಂಗಡಿಗಳನ್ನು ಮುಚ್ಚಿಸಿದರು.
‘ಕರೋನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ತುರ್ತು ಕೆಲಸಗಳಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು’ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. ಪೋಲಿಸರು ಆಸಕ್ತಿ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿಲ್ಲ ಎಂದು ತಹಶೀಲ್ದಾರ್ ಬೇಸರವನ್ನೂ ವ್ಯಕ್ತಪಡಿಸಿದರು.