‘ಕೆಂಪು ಬಂಗಾರ’ ಎಂದೇ ಹೆಸರಾದ ಮೆಣಸಿನಕಾಯಿ ರೈತರಿಗೆ ಹೆಚ್ಚಿನ ಆದಾಯ ತಂದು ಕೊಡುವ ಬೆಳೆ. ಹೀಗಾಗಿ ಹೆಚ್ಚಿನ ರೈತರು ಮೆಣಸಿನಕಾಯಿ ಬೆಳೆಯಲು ಆಸಕ್ತಿ ತೋರಿಸುತ್ತಾರೆ. ಮುಂಗಾರಿನಲ್ಲಿ ಹೆಸರು ಬೆಳೆ ಕೈಕೊಟ್ಟರೆ, ಅದನ್ನು ಮೆಣಸಿನಕಾಯಿ ಮತ್ತು ಕಡಲೆ ಬೆಳೆದು ಸರಿದೂಗಿಸಿಕೊಳ್ಳುತ್ತಾರೆ. ಉತ್ತಮ ಮಳೆ ಲಭಿಸಿದರೆ ಮೆಣಸಿನಕಾಯಿಯಿಂದ ಬಂಪರ್ ಲಾಭ ಲಭಿಸುತ್ತದೆ. ಈ ಬೆಳೆಯನ್ನೇ ನೆಚ್ಚಿಕೊಂಡು ಉತ್ತರ ಕರ್ನಾಟಕ ಭಾಗದ ರೈತರು ಮಕ್ಕಳ ಮದುವೆ, ಮನೆ ಕಟ್ಟುವ ಯೋಜನೆ ಇಟ್ಟುಕೊಂಡಿರುತ್ತಾರೆ. ಆದರೆ, ಈ ಬಾರಿ ವರುಣನ ಅವಕೃಪೆ ರೈತರ ಆಸೆಯನ್ನು ನುಚ್ಚುನೂರು ಮಾಡಿದೆ.