ಲಕ್ಕುಂಡಿ (ಗದಗ): ‘ಧರ್ಮಸ್ಥಳ ಕ್ಷೇಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳು ಹಾಗೂ ಪ್ರಗತಿ ಬಂಧು ತಂಡಗಳು ಕಳೆದ ವರ್ಷ ಗದಗ ಜಿಲ್ಲೆಯಲ್ಲಿ ₹196 ಕೋಟಿಯಷ್ಟು ವ್ಯವಹಾರ ಮಾಡಿ, ಪ್ರಥಮ ಸ್ಥಾನದಲ್ಲಿದೆ’ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ ಹೇಳಿದರು.
ಇಲ್ಲಿಯ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಶಿ ವಿಶ್ವನಾಥ, ತ್ರಿಷೀಕಾ, ಸಂತೋಷ ಮಾತಾ, ಮಲ್ಲಿಕಾರ್ಜುನ, ಗೌರಿ ಗಣೇಶ ಜಲಧಾರೆ, ಲಕ್ಷ್ಮೀ ನಾರಾಯಣ ಸ್ವ ಸಹಾಯ ಸಂಘಗಳ ವಾರ್ಷಿಕೋತ್ಸವ ಹಾಗೂ ಕೊರೊನಾ ಸೇನಾನಿಗಳ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಾಲ ಮರುಪಾವತಿಯಲ್ಲಿ ಗದಗ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 10,100 ಗುಂಪುಗಳಿದ್ದು ವಾರಕ್ಕೆ ₹3.5 ಕೋಟಿಯಷ್ಟು ಉಳಿತಾಯ ಮಾಡಿದ್ದು ಸಾಧನೆಯಾಗಿದೆ’ ಎಂದು ಹೇಳಿದರು.
ಮಹಿಳಾ ಪೊಲೀಸ್ ನಾಗರತ್ನ ಕಲಕೇರಿ ಹಾಗೂ ಆರೋಗ್ಯ ಸಿಬ್ಬಂದಿ ಸವಿತಾ ಪವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಂಘದ ಸದಸ್ಯೆ ಸಾವಿತ್ರಿ ಯಲಿಶಿರುಂಜ ಮಾತನಾಡಿದರು.
ಕೊರೊನಾ ಸೇನಾನಿಗಳಾದ ನಾಗರತ್ನ ಕಲಕೇರಿ, ಸವಿತಾ ಪವಾರ, ಅಂಗನವಾಡಿ ಕಾರ್ಯಕರ್ತೆ ಕವಿತಾ ಬಡಿಗೇರ, ಮಾಜಿ ಸೈನಿಕ ಮಹಾಂತೇಶ ಚವಡಿ, ಲಸಿಕೆ ಪಡೆದ ಪಕ್ಕಮ್ಮ ಕಳ್ಳಿಮಠ, ದೇವಕ್ಕೆಮ್ಮ ಸೋಮನಕಟ್ಟಿ,ಗ್ರಾ.ಪಂ ಸದಸ್ಯರಾದ ಬಸವರಾಜ ಯಲಿಶಿರುಂಜ, ಅಮೀನಾ ಹುಬ್ಬಳ್ಳಿ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸೈನಿಕ ಮಹಾಂತೇಶ ಚವಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಯೋಜನಾಧಿಕಾರಿ ಎ.ಎಸ್.ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶಕುಮಾರ ಸಲಗಾರ ಸ್ವಾಗತಿಸಿದರು. ಮೇಲ್ವಿಚಾರಕ ಚಂದ್ರಶೇಖರ ಪೆಡ್ನೆಕರ ನಿರೂಪಿಸಿದರು. ಅನ್ನಪೂರ್ಣ ಬಡಿಗೇರ ವಂದಿಸಿದರು.