ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ಮಾದರಿಯೇ ಬದುಕಿನ ಹೆದ್ದಾರಿ’

ನಗರದ ವಿವಿಧೆಡೆ ಬಾಪೂಜಿಗೆ ನಮನ; ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನದ ಸಂಭ್ರಮ
Last Updated 3 ಅಕ್ಟೋಬರ್ 2020, 6:01 IST
ಅಕ್ಷರ ಗಾತ್ರ

ಗದಗ: ಮಹಾತ್ಮ ಗಾಂಧೀಜಿ ಈ ಯುಗ ಕಂಡ ಮಹಾನ್ ವ್ಯಕ್ತಿಗಳಲ್ಲಿ ಮೊದಲಿಗರು ಎಂದು ಗದಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಚಾರ್ಯ ಡಾ. ಎಸ್.ಎಫ್.ಸಿದ್ನೇಕೊಪ್ಪ ಹೇಳಿದರು.

‘ಗಾಂಧೀಜಿ ಬದುಕಿ ತೋರಿಸಿದ ಮಾದರಿಯೇ; ಸರ್ವರಿಗೂ ಬದುಕಿನ ಹೆದ್ದಾರಿ. ಉಕ್ಕಿನ ಮನುಷ್ಯರೆಂದೇ ಜನರ ಮನದಲ್ಲಿ ನೆಲೆಯೂರಿದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಪ್ರಾಮಾಣಿಕ ಬದುಕು ನಮ್ಮೆಲ್ಲರ ಬದುಕಾಗಬೇಕಾಗಿದೆ’ ಎಂದರು.

ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ರಮೇಶ ಸಂಕರಡ್ಡಿ ಮಾತನಾಡಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ. ಆರ್.ಎಂ.ಕಲ್ಲನಗೌಡರ ಸ್ವಾಗತಿಸಿದರು. ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಡಾ. ಕಸ್ತೂರೆವ್ವ ದಳವಾಯಿ ಪೂಜೆ ಸಲ್ಲಿಸಿದರು.

ಗಾಂಧಿ ವೃತ್ತದಲ್ಲಿ ಸಂಕಲ್ಪ ದಿನ
ಗದಗ:
ಬಿಜೆಪಿ ಗದಗ ಜಿಲ್ಲಾ ಘಟಕದ ವತಿಯಿಂದ ಗದಗ ನಗರದ ಗಾಂಧಿ ವೃತ್ತದಲ್ಲಿ ಗಾಂಧಿ ಜಯಂತಿಯನ್ನು ಸಂಕಲ್ಪ ದಿನವನ್ನಾಗಿ ಆಚರಿಸಲಾಯಿತು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ.ಸಂಕನೂರ, ಸಂಗಮೇಶ ದುಂದೂರ, ಶ್ರೀಪತಿ ಉಡುಪಿ, ಕಾಂತಿಲಾಲ ಬನ್ಸಾಲಿ, ಎಂ.ಎಸ್.ಕರೀಗೌಡ್ರ, ಶಿವರಾಜಗೌಡ ಹಿರೇಮನಿಪಾಟೀಲ, ಪುಷ್ಪಾ ಪೂಜಾರ, ಪಾರ್ವತಿ ಪಟ್ಟಣಶೆಟ್ಟಿ, ಜಯಶ್ರೀ ಬೈರವಾಡೆ ಹಾಗೂ ಮುಖಂಡರು ಇದ್ದರು.

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

‘ಆದರ್ಶ ಅಳವಡಿಸಿಕೊಳ್ಳಿ’
ಗದಗ:
ಇಂದಿನ ಯುಗದಲ್ಲಿ ಪ್ರತಿ ಯೊಬ್ಬರು ಗಾಂಧೀಜಿಯವರ ಮತ್ತು ಶಾಸ್ತ್ರೀಜಿಯವರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಎಂ.ಎಂ.ಬುರುಡಿಯವರು ಹೇಳಿದರು.

ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಮತ್ತು ತೋಂಟದ ಸಿದ್ದೇಶ್ವರ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

‘ಕಿಸಾನ್ ಮಜ್ದೂರ್ ಬಚಾವೋ ದಿವಸ್’
ಗಜೇಂದ್ರಗಡ:
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ, ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ‘ಕಿಸಾನ್ ಮಜ್ದೂರ್ ಬಚಾವೋ ದಿವಸ್’ ಕಾರ್ಯಕ್ರಮವಾಗಿ ಕಾಂಗ್ರೆಸ್‌ ಕಾರ್ಯಕರ್ತರು ಆಚರಿಸಿದರು.

‘ಗಾಂಧೀಜಿ ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿ ದೇಶವನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಲು ಶ್ರಮಿಸಿದ್ದರು. ಆದರೆ ಸದ್ಯ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಜನ ವಿರೋಧಿ ಮತ್ತು ಸಂವಿಧಾನಕ್ಕೆ ವಿರುದ್ಧವಾದ ಕಾನೂನು ತಿದ್ದುಪಡಿ ತರುವ ನಿಟ್ಟಿನಲ್ಲಿ ಉತ್ಸುಕರಾಗಿರುವುದು ದುರದೃಷ್ಟಕರ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು. ಮುಖಂಡರಾದ ಶಿವರಾಜ ಘೋರ್ಪಡೆ, ವೀರಣ್ಣ ಸೊನ್ನದ, ಶ್ರೀಧರ ಗಂಜಿಗೌಡ್ರ, ಎಚ್.ಎಸ್.ಸೋಂಪೂರ, ಅಪ್ಪು ಮತ್ತಿಕಟ್ಟಿ, ರಾಜು ಸಾಂಗ್ಲೀಕರ, ಮುರ್ತುಜಾ ಡಾಲಾಯತ, ಶ್ರೀಧರ ಬಿದರಳ್ಳಿ, ಬಸವರಾಜ ಚನ್ನಿ, ಯಲ್ಲಪ್ಪ ಬಂಕದ, ಬಸವರಾಜ ಬಂಕದ, ಉಮೇಶ ರಾಠೋಡ, ದಾದು ತಾಳಿಕೊಟಿ, ಅನಿಲ ಕರ್ಣೆ, ಅಶೋಕ ಕೊಪ್ಪಳ, ಅಂದಪ್ಪ ರಾಠೋಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಯ್ದೆ ತಿದ್ದುಪಡಿ ವಿರೋಧಿ ದಿನ
ಲಕ್ಷ್ಮೇಶ್ವರ:
ಗಾಂಧೀಜಿ ಮತ್ತು ಲಾಲ್‍ಬಹಾದ್ದೂರ ಶಾಸ್ತ್ರಿ ಅವರ ಜನ್ಮ ದಿನವನ್ನು ಶುಕ್ರವಾರ ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ, ಹಾಗೂ ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿ ದಿನವನ್ನಾಗಿ ಆಚರಿಸಿ, ತಿದ್ದುಪಡಿ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್‍ನ ಉಸ್ತುವಾರಿ ವೀರೇಂದ್ರಗೌಡ ಪಾಟೀಲ ಮಾತನಾಡಿದರು.

ವಿ.ಜಿ. ಪಡಗೇರಿ, ಸುರೇಶ ಬೀರಣ್ಣವರ, ನೀಲಪ್ಪ ಪಡಗೇರಿ, ಎಂ.ಎಸ್. ದೊಡ್ಡಗೌಡ್ರ, ಮಹಾದೇವಪ್ಪ ಅಣ್ಣಿಗೇರಿ, ವಿಜಯ ಕರಡಿ, ರಾಜಣ್ಣ ಕುಂಬಿ, ಜಯಕ್ಕ ಕಳ್ಳಿ, ಮಹಾದೇವಪ್ಪ ಅಂದಲಗಿ, ಕಿರಣ ನವಲೆ, ಶೇಕಪ್ಪ ಕಾಳೆ, ಸಿದ್ದಪ್ಪ ಕರಿಗಾರ, ಫಕ್ಕೀರೇಶ ನಂದೆಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT