ಡಂಬಳ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳಿಂದ ಗ್ರಾಮ ಒನ್ ಕೇಂದ್ರದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಬಂದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಡಂಬಳ ನಾಡಕಾರ್ಯಾಲಯದ ಉಪತಹಶೀಲ್ದಾರ್ ಸಿ.ಕೆ. ಬಳೂಟಗಿ ವಿವಿಧ ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಗ್ರಾಹಕರಿಂದ ಹಣ ವಸೂಲಿ ಮಾಡದಂತೆ ಖಡಕ್ ಸೂಚನೆ ನೀಡಿದರು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳ ಒಂದು ರೂಪಾಯಿ ಸಹ ಖರ್ಚು ಆಗದಂತೆ ಮಹಿಳೆಯರಿಗೆ ಹಣ ನೀಡಬೇಕು ಎನ್ನುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಸೇವೆ ನೀಡುವ ಕೇಂದ್ರಗಳಿಗೆ ಸರ್ಕಾರವೇ ಸೇವಾ ಶುಲ್ಕ ಎಂದು ಒಂದು ಅರ್ಜಿಗೆ ₹20 ನೀಡುತ್ತದೆ. ಫಲಾನುಭವಿಗಳಿಂದ ನೋಂದಣಿಗೆ ಹಣ ಪಡೆದರೆ ಸೇವಾ ಕೇಂದ್ರದ ಪರವಾನಗಿ ರದ್ದುಪಡಿಸಲಾಗವುದು ಹಾಗೂ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಪತಹಶೀಲ್ದಾರ್ ಸಿ.ಕೆ. ಬಳೂಟಗಿ ಎಚ್ಚರಿಕೆ ನೀಡಿದರು.
ಗ್ರಾಹಕರಿಂದ ಒನ್ ಗ್ರಾಮ ಸೇವಾ ಕೇಂದ್ರದವರು ಒಂದು ಅರ್ಜಿ ಶುಲ್ಕಕ್ಕಾಗಿ ₹40ರಿಂದ ₹60 ವಸೂಲಿ ಮಾಡುತ್ತಿದ್ದಾರೆ. ಕೆಲವೊಂದು ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಕಲರ್ ಪ್ರಿಂಟ್ ಹೆಸರಲ್ಲಿ ಹಣ ಪಡೆಯುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿವೆ. ಹೀಗಾಗಿ ಹೋಬಳಿ ವ್ಯಾಪ್ತಿಯಲ್ಲಿನ ವಿವಿಧ ಸೇವಾ ಕೇಂದ್ರದಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನಿಗದಿತ ಕೊನೆಯ ದಿನಾಂಕವನ್ನು ನಿಗದಿ ಪಡಿಸಿಲ್ಲ. ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು. ಯಾವುದಾದರು ಸೇವಾ ಕೇಂದ್ರದಲ್ಲಿ ಹಣ ವಸೂಲಿ ಮಾಡಿದರೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಅಥವಾ ನಾಡಕಚೇರಿಗೆ ದೂರು ಸಲ್ಲಿಸಬಹುದು ಎಂದು ಸಾರ್ವಜನಿಕರಿಗೆ ಸಿ.ಕೆ. ಬಳೂಟಗಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.