ಗಜೇಂದ್ರಗಡ: ‘ಇಂದಿನ ದುಬಾರಿ ಜೀವನದಲ್ಲಿ ಸಾಲ ಮಾಡಿ ಮದುವೆ ಮಾಡುವುದಕ್ಕಿಂತ ಸರಳ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡುವುದರಿಂದ ಹಣ ಉಳಿತಾಯವಾಗುವುದರ ಜೊತೆಗೆ ಸಮಾಜದಲ್ಲಿ ಸಾಮಾರಸ್ಯ ಮೂಡಿಸುತ್ತದೆʼ ಎಂದು ಬಾದಿಮನಾಳ ಶಾಖಾ ಕನಕ ಗುರುಪೀಠದ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ರಾಜೂರು ಗ್ರಾಮದಲ್ಲಿ ಗುರುವಾರ ನಡೆದ ಬೀರಲಿಂಗೇಶ್ವರ ಪುರಾಣ ಮಹಾಮಂಗಲ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ʼಮದುವೆ ಬಳಿಕ ಅತ್ತೆಯಂದಿರುವ ಸೊಸೆಯನ್ನು ಮಗಳಂತೆ ಪ್ರೀತಿಸಿದರೆ ನಿಮ್ಮ ಕುಟುಂಬ ಸಂತೋಷದಿಂದಿರುತ್ತದೆʼ ಎಂದರು.
ಸಾಮೂಹಿಕ ವಿವಾಹದಲ್ಲಿ 6 ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆಲಮಟ್ಟಿ ಪೂರ್ಣಾನಂ ಆಶ್ರಮ ಸೀತಿಮನಿ ವಶಿಷ್ಟ ಸ್ವಾಮೀಜಿ, ಬೀರಲಿಂಗೇಶ್ವರ ಶಾಸ್ತ್ರಿಗಳು, ಕಳಕಯ್ಯ ಸಾಲಿಮಠ, ವೀರಯ್ಯ ಸಾಲಿಮಠ, ಶಿವಯ್ಯ ಹಿರೇಮಠ, ಶಂಕ್ರಯ್ಯ ಸಾಲಿಮಠ, ವೀರಯ್ಯ ಕಲ್ಮಠ ಸೇರಿದಂತೆ ಇತರರು ಇದ್ದರು.
ಲಘು ರತೋತ್ಸವ: ಸಂಜೆ ಬೀರಲಿಂಗೇಶ್ವರ ದೇವಸ್ಥಾನದಿಂದ ಗ್ರಾಮ ಪಂಚಾಯ್ತಿ ಹತ್ತಿರವಿರುವ ಪಾದಗಟ್ಟಿವರೆಗೆ ಲಘು ರತೋತ್ಸವ ಹಾಗೂ ಪಾಲಕಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಸಕಲ ವಾದ್ಯಗಳೊಂದಿಗೆ ಗ್ರಾಮದ ನೂರಾರು ಜನರು ಲಘು ರತೋತ್ಸವದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು.