ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ನೀಡಿದ ಸಲಹೆ ಪರಿಗಣಿಸಿ -ಜಿಲ್ಲಾ ಉಸ್ತುವಾರಿ ಸಚಿವರಿಗೆ ಪಾಟೀಲ ಪತ್ರ

Last Updated 15 ಮೇ 2021, 3:29 IST
ಅಕ್ಷರ ಗಾತ್ರ

ಗದಗ: ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮೇ 3ರಂದು ನಡೆದ ಸಭೆಯಲ್ಲಿ ಜಿಲ್ಲೆಯ ಜನರ ಜೀವ ರಕ್ಷಣೆಗಾಗಿ ನೀಡಿದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳನ್ನು ತುರ್ತಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿ ಶಾಸಕ ಎಚ್‌.ಕೆ.ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರಿಗೆ ನೆನಪಿಸುವ ಪತ್ರ ಬರೆದಿದ್ದಾರೆ.

‘ತಾವು ಕರೆದ ಸಭೆಯಲ್ಲಿ ಭಾಗವಹಿಸಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವಾರು ಸಲಹೆಗಳನ್ನು ನೀಡಿದ್ದೇನೆ. ಅವುಗಳ ಬಗ್ಗೆ ತಮಗೆ ನೆನಪಿದೆ ಎಂದು ಭಾವಿಸುವೆ. ನಾನು ನೀಡಿದ ಸಲಹೆಗಳು ಗದಗ ಜಿಲ್ಲೆಯ ಜನರ ಜೀವ ರಕ್ಷಣೆಗಾಗಿ ನೀಡಿದಂತವು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಹೊಸದಾಗಿ ವೆಂಟಿಲೇಟರ್ ತರಿಸಿರುವುದರ ಬಗ್ಗೆ ಖುಷಿ ಇದೆ. ಆದರೆ, ಬಂದ ವೆಂಟಿಲೇಟರ್‌ಗಳಿಗೆ ಕನೆಕ್ಟರ್‌ಗಳಿಲ್ಲ ಎಂದು ಆರು ದಿನಗಳಿಂದ 25 ವೆಂಟಿಲೇಟರ್‌ಗಳು ಅಲ್ಲಿಯೇ ಖಾಲಿ ಕುಳಿತಿವೆ. ಈ ನಡುವೆ ವೆಂಟಿಲೇಟರ್ ಇಲ್ಲದೇ ಹತ್ತಾರು ರೋಗಿಗಳು ಸಾವನ್ನಪ್ಪಿದ್ದಾರೆ’ ಎಂದು ಅವರು ದೂರಿದ್ದಾರೆ.

‘ಆಮ್ಲಜನಕದ ವಿಷಯವಂತೂ ಗೊಂದಲಮಯ. ಜಿಲ್ಲೆಗೆ ಎಷ್ಟು ಆಮ್ಲಜನಕ ಬೇಕೋ ಅಷ್ಟು ಪ್ರಮಾಣದಲ್ಲಿ ತರಲು ಗಂಭೀರ ಪ್ರಯತ್ನ ಆಗಿಲ್ಲ. ಆಮ್ಲಜನಕ ಹಂಚಿಕೆಯಲ್ಲಿ ಸರ್ಕಾರ ಗದಗ ಜಿಲ್ಲೆಯನ್ನು ಕಡೆಗಣಿಸಿದೆ. 70 ಕಿ.ಮೀ. ದೂರದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವಿದ್ದರೂ ನಮಗೆ ಬೇಕಾದ ಕೇವಲ 15 ರಿಂದ 20 ಕೆ.ಎಲ್‌. ಆಮ್ಲಜನಕ ದೊರೆಯುತ್ತಿಲ್ಲ. ಏನಿದರ ಅರ್ಥ? ಪ್ರತಿದಿನ ಆಕ್ಸಿಜನ್ ಕೊರತೆಯಿಂದ ಹಾಗೂ ಸೂಕ್ತ ಸಮಯಕ್ಕೆ ಬೆಡ್ ಸಿಗದೇ ಇರುವ ಕಾರಣ ಪ್ರತಿದಿನ ಹತ್ತಾರು ಜನ ಸಾವನ್ನಪ್ಪುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಜಿಲ್ಲಾಡಳಿತ ಆಮ್ಲಜನಕವನ್ನು ಇಷ್ಟೇ ಪ್ರಮಾಣದಲ್ಲಿ ಉಪಯೋಗಿಸಬೇಕು, ಹೆಚ್ಚಿನ ಆಮ್ಲಜನಕ ಇಲ್ಲ ಎಂದು ಹೇಳುವ ಸ್ಥಿತಿಗೆ ಬಂದಿದೆ. ಪ್ರತಿದಿನ ನಮಗೆ 18ರಿಂದ 20 ಕೆ.ಎಲ್‌. ಆಮ್ಲಜನಕ ಒದಗಿಸದೇ ಹೋದರೆ ಆಕ್ಸಿಜನ್ ಬೆಡ್ ಸಿಗದೇ ಆಸ್ಪತ್ರೆ ಅವರಣದಲ್ಲೇ ಸೊಂಕಿತರು ಸಾವನ್ನಪ್ಪಬೇಕಾದೀತು. ಆದ್ದರಿಂದ ದಯವಿಟ್ಟು ತಕ್ಷಣವೇ ಜಾಗೃತಾಗಿ ಆಮ್ಲಜನಕ ಪೂರೈಕೆಗೆ ತುರ್ತು ಕ್ರಮ ವಹಿಸಿ’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT