ಡಂಬಳ: ಇಲ್ಲಿಯ ರೈತರೊಬ್ಬರು ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತಿದ ಮೆಕ್ಕೆಜೋಳ ಕಟಾವಿಗೆ ಮುಂಚಿತವಾಗಿಯೇ ಒಣಗುತ್ತಿದೆ.
ಡಂಬಳ ಹೋಬಳಿ ಪೇಠಾ ಆಲೂರ ಗ್ರಾಮದ ರೈತ ಹಾಲಪ್ಪ ವ್ಯಾಪಾರಿ 2023ರ ಸೆಪ್ಟಂಬರ್ ತಿಂಗಳಲ್ಲಿ ಮುಂಡರಗಿ ನಗರದ ಶಾಂತಲಾ ಆಗ್ರೋ ಅಂಗಡಿಯಲ್ಲಿ ಎನ್ಯುಜಿಇಎನ್ಇಎಸ್ ಎನ್ಯು 77ಎನ್99 ತಳಿಯ 8 ಪ್ಯಾಕೆಟ್ ಬೀಜ ಖರೀದಿ ಮಾಡಿದ್ದರು. ₹ 10 ಸಾವಿರ ಬಿಲ್ ಪಾವತಿ ಮಾಡಿದ್ದರು. ಅದನ್ನು ತಮ್ಮ 6 ಎಕರೆ ನೀರಾವರಿ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಎಕರೆ ಬಿತ್ತನೆಗೆ ಇವರಿಗೆ ಅಂದಾಜು ₹ 1 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ. ಬೆಳೆ ಉತ್ತಮವಾಗಿಯೇ ಬಂದಿತ್ತು. ಆದರೆ ದಿನ ಕಳೆದಂತೆ ಹಸಿಗಡಿಗಳು ತಾವೇ ಒಣಗುತ್ತಿವೆ. ಈಗಾಗಲೆ ಬಿತ್ತನೆ ಮಾಡಿದ್ದ ಅರ್ಧ ಜಮೀನು ಸಂಪೂರ್ಣ ಒಣಗಿದೆ. ಬೀಜ ಖರೀದಿ ಮಾಡಿರುವ ಖಾಸಗಿ ಅಂಗಡಿಯವರಿಗೆ ಈ ವಿಷಯ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.
‘ಕೃಷಿ ಇಲಾಖೆಯ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬೀಜ ಕಂಪನಿಯರು ಸೂಕ್ತ ಪರಿಹಾರ ನೀಡಬೇಕು’ ಎಂದುಹಾಲಪ್ಪ ವ್ಯಾಪಾರಿ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ತಾಲ್ಲೂಕ ಕೃಷಿ ಅಧಿಕಾರಿ ಪ್ರಮೋದ ತುಂಬಾಳೆ, ‘ಕಟಾವಿಗೆ ಮುಂಚಿತವಾಗಿ ಮೆಕ್ಕೆಜೋಳ ಬೆಳೆ ಒಣಗುತ್ತಿರುವ ಕುರಿತು ನಮಗೆ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.