ನಗರಾಭಿವೃದ್ಧಿ, ಕಂದಾಯ, ಸಾರಿಗೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಸಾರಿಗೆ ಇಲಾಖೆಯವರು ನ.30ರಿಂದ ಡಿ.5ರವರೆಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಡಿ.7ರಿಂದ 11ರವರೆಗೆ, ಉಳಿದ ಎಲ್ಲ ಇಲಾಖೆಗಳು ಡಿ.14ರಿಂದ 19ರವರೆಗೆ ಸಕಾಲ ಸಪ್ತಾಹ ಆಚರಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಹೊಸದಾಗಿ ಸ್ವೀಕರಿಸಿರುವ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು. ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಸಕಾಲ ತಂಡ ಕಚೇರಿಗೆ ಭೇಟಿ ನೀಡಿ, ತಪಾಸಣೆ ನಡೆಸುವುದು. ಸಾರ್ವಜನಿಕರ ಅಭಿಪ್ರಾಯ ಕ್ರೋಡೀಕರಿಸಲು ಹೆಲ್ಪ್ ಡೆಸ್ಕ್ ಸಹಾಯದೊಂದಿಗೆ ಪ್ರಶ್ನಾವಳಿಯನ್ನು ಸಾರ್ವಜನಿಕರಿಂದ ಭರ್ತಿ ಮಾಡಿಸುವುದು ಸೇರಿದಂತೆ ಸಕಾಲ ಯೋಜನೆ ಕುರಿತು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರದ ಸೇವೆಗಳನ್ನು ವಿಳಂಬವಿಲ್ಲದೇ, ಕಾಲಮಿತಿಯೊಳಗೆ ನೀಡುವ ಮಹಾತ್ವಾಕಾಂಕ್ಷಿಯೊಂದಿಗೆ ಕರ್ನಾಟಕ ನಾಗರಿಕರ ಸೇವೆಗಳ ಖಾತರಿ ಅಧಿನಿಯಮವನ್ನು 2012ರಲ್ಲಿ ಜಾರಿಗೆ ತರಲಾಯಿತು. ಸಕಾಲ ಯೋಜನೆಯಡಿ ಒಟ್ಟು 27 ಇಲಾಖೆ, ಸಂಸ್ಥೆಗಳ 1,020ಕ್ಕೂ ಹೆಚ್ಚಿನ ನಾಗರಿಕ ಕೇಂದ್ರಿತ ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು.
ಗದಗ ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಎಂ. ಮಾತನಾಡಿ, ‘ಜಿಲ್ಲೆಯಲ್ಲಿ ಸಕಾಲದಡಿ ನ.26ರವರೆಗೆ 32,896 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 1,906 ಅರ್ಜಿಗಳು ತಿರಸ್ಕೃತಗೊಂಡಿದ್ದು, 1,301 ಅರ್ಜಿಗಳು ಬಾಕಿ ಉಳಿದಿವೆ. ಕೆಲವು ಇಲಾಖೆಯಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಸಕಾಲ ಯೋಜನೆ ಅಡಿ ಅರ್ಜಿಗಳು ಸ್ವೀಕಾರ ಆಗಿಲ್ಲ’ ಎಂದು ತಿಳಿಸಿದರು.