ರೋಣ: 2019-20 ನೇ ಸಾಲಿನಲ್ಲಿ ಹಾನಿಯಾದ ಈರುಳ್ಳಿ ಬೆಳೆಗೆ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಕೃಷಿಕ ಸಮಾಜ ತಾಲ್ಲೂಕು ಘಟಕದಿಂದ ತಹಶಿಲ್ದಾರ್ ಜೆ.ಬಿ.ಜಕ್ಕನಗೌಡ್ರ ಮೂಲಕ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಸಜ್ಜನರ ಮಾತನಾಡಿ, 2019-20 ನೇ ಸಾಲಿನಲ್ಲಿ ತಾಲ್ಲೂಕಿನ ಬಹುತೇಕ ರೈತರು ಈರುಳ್ಳಿ ಬೆಳೆಯನ್ನು ಬೆಳೆದಿದ್ದರು. ಆದರೆ ಅಕಾಲಿಕ ಮಳೆಯಿಂದಾಗಿ ಬೆಳೆ ಹಾಳಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ವರ್ಷಪೂರ್ತಿ ರೈತರು ಕಷ್ಟಪಟ್ಟು ಬೆಳೆದ ಬೆಳೆಯೂ ಸಂಪೂರ್ಣ ನಾಶವಾಗಿದ್ದು, ಬೆಳೆ ಬೆಳೆಯಲು ಖರ್ಚು ಮಾಡಿದ ಹಣ ಸಹ ರೈತರ ಕೈಗೆ ಸಿಗದಂತಾಗಿದೆ. ಸಾಲಸೂಲ ಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆಯೂ ಸಹ ಸಿಗದೇ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಸರ್ಕಾರವು ಹೆಕ್ಟೇರ್ಗೆ ₹6 ಸಾವಿರ ಪರಿಹಾರ ನಿಗದಿಪಡಿಸಿದ್ದು, ತೋಟಗಾರಿಕೆ ಇಲಾಖೆ ಜಿ.ಪಿ.ಎಸ್ ಮಾಡುವ ಸಂದರ್ಭದಲ್ಲಿ ಹಲವು ಲೋಪದೋಷವಾದ ಕಾರಣ ಸಾಕಷ್ಟು ರೈತರಿಗೆ ಇದುವರೆಗೂ ಪರಿಹಾರದ ಹಣ ಸಹ ತಲುಪಿಲ್ಲ. ಇದರಿಂದಾಗಿ ರೈತರಿಗೆ ಅನ್ಯಾಯವಾಗಿದೆ ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಂದು ಎಚ್ಚರಿಕೆ ನೀಡಿದರು.