ಹೊಳೆಆಲೂರ (ರೋಣ): ತಾಲ್ಲೂಕಿನಲ್ಲಿಯೇ ಅತ್ಯಂತ ದೊಡ್ಡ ಪಂಚಾಯ್ತಿ ಎಂಬ ಹೆಗ್ಗಳಿಕೆ ಹೊಂದಿರುವ ಹೊಳೆಆಲೂರು ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಗ್ರಾಮದ ಚರಂಡಿಗಳು ಹಲವು ವರ್ಷಗಳಿಂದ ಸ್ವಚ್ಛತೆ ಕಂಡಿಲ್ಲ. ರಸ್ತೆಗಳು ದುರಸ್ತಿ ಆಗಿಲ್ಲ. ಹೊಸದಾಗಿ ಆಯ್ಕೆಯಾಗಿರುವ ಸದಸ್ಯರು, ಅಧ್ಯಕ್ಷರು ಇತ್ತ ಗಮನಹರಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಊರಿನ ಚರಂಡಿಗಳಲ್ಲಿ ನೀರು ಹರಿಯುವುದಿಲ್ಲ. ಇದ್ದಲ್ಲಿಯೇ ಇಂಗಬೇಕು ಇಲ್ಲದಿದ್ದರೆ, ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತದೆ. ಚರಂಡಿ ಸ್ವಚ್ಛಗೊಳಿಸಲು ಪಂಚಾಯ್ತಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಇದರಿಂದಾಗಿ 15 ದಿನಕ್ಕೆ ಒಮ್ಮೆ ಚರಂಡಿ ಸ್ಚಚ್ಛವಾದರೆ ಅದೇ ದೊಡ್ಡದು ಎಂಬಂತಹ ಪರಿಸ್ಥಿತಿ ಇದೆ.
ಮೊದಲೇ ಹದಗೆಟ್ಟು ಹೋಗಿರುವ ಇಲ್ಲಿನ ರಸ್ತೆಗಳು ಅತಿವೃಷ್ಟಿಯಿಂದಾಗಿ ಮತ್ತಷ್ಟು ಹದಗೆಟ್ಟಿವೆ. ಎಲ್ಲೆಡೆ ತಗ್ಗು ದಿಣ್ಣೆಗಳು ನಿರ್ಮಾಣವಾಗಿವೆ. ಹಿಂದೆ ಮಾಡಿದ ಸಿ.ಸಿ.ರಸ್ತೆಗಳು ಕಳಪೆ ಕಾಮಗಾರಿಗಳಿಂದ ಕಡಿ ಮೇಲೆದ್ದು ಬಿರುಕು ಬಿಟ್ಟಿವೆ. ಮಳೆಗಾಲದೊಳಗೆ ಸರಿಯಾಗದಿದ್ದರೆ ಸಂಕಷ್ಟ ತಪ್ಪಿದ್ದಲ್ಲ ಎಂದು ವಾಹನ ಸವಾರರು ಅಲವತ್ತುಕೊಂಡಿದ್ದಾರೆ.
ಉದ್ಯೋಗ ಖಾತ್ರಿಯಡಿ ಗ್ರಾಮದಲ್ಲಿ ಐದು ವರ್ಷಗಳಲ್ಲಿ ಆಗಿರುವ ಕೃಷಿ ಹೊಂಡ, ಬದು ನಿರ್ಮಾಣ, ದನದ ಕೊಟ್ಟಿಗೆ, ನಮ್ಮ ಹೊಲ ನಮ್ಮ ರಸ್ತೆಗಳಲ್ಲಿ ಈಗ ನೋಡುತ್ತಿರುವುದು ದುರ್ಲಬ. ಕಾಮಗಾರಿಗಳು ಕೇವಲ ಬಿಲ್ಲಿಗಾಗಿ ಮಾತ್ರವೇ ನಡೆದಿವೆಯೇ ಎಂಬ ಅನುಮಾನ ಕಾಡುತ್ತದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.