ಎಸ್.ಟಿ ಮೀಸಲಿಗಾಗಿ ಬೆಂಗಳೂರಿನಲ್ಲಿ ನಾಳೆ ಕುರುಬರ ಸಮಾವೇಶ
ಗದಗ: ‘ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಬೆಂಗಳೂರು ತಲುಪಿದ್ದು, ಭಾನುವಾರ ಬೆಂಗಳೂರಿನ ತುಮಕೂರು ರಸ್ತೆಯ ಮಾದಾವರದಲ್ಲಿರುವ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಸಮಾವೇಶ ನಡೆಯಲಿದೆ’ ಎಂದು ಹಾಲುಮತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.
2ಎಗೆ ಪಂಚಮಸಾಲಿ ಸಮುದಾಯ ಸೇರಿಸುವ ಮುನ್ನ ಹಾಲಿ ಮೀಸಲಾತಿ ಶೇಕಡಾವಾರು ಪ್ರಮಾಣ ಹೆಚ್ಚಿಸಿ, ಸೇರ್ಪಡೆ ಮಾಡಿ. ಜೊತೆಗೆ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿ, ಕುರುಬರನ್ನು ಆ ಪಟ್ಟಿಗೆ ಸೇರಿಸಲಿ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಉತ್ತರ ಕರ್ನಾಟಕದದಿಂದ ಕನಿಷ್ಠ ಅಪಾರ ಜನ ಭಾಗವಹಿಸುವ ನಿರೀಕ್ಷೆ ಇದೆ. ಈ ಸಮಾವೇಶವು ಪಕ್ಷಾತೀತವಾಗಿದ್ದು, ಸಮಾಜದ ಸಹಕಾರದಿಂದ ಅಧಿಕಾರಕ್ಕೆ ಬಂದ ಸಮುದಾಯದ ಎಲ್ಲ ನಾಯಕರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅವರು ಭಾಗವಹಿಸದಿದ್ದರೆ ಮುಂದಿನ ದಿನಗಳಲ್ಲಿ ಪರ್ಯಾಯ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಯೋಚಿಸಲಾಗುವುದು’ ಎಂದು ತಿಳಿಸಿದರು.
ಹಾಲುಮತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಲ್ಹಾದ ಹೊಸಳ್ಳಿ ಮಾತನಾಡಿ, ಬೆಂಗಳೂರಿನ ಸಮಾವೇಶಕ್ಕೆ ಗದಗ ಜಿಲ್ಲೆಯಿಂದ ಸಾವಿರಾರು ಜನ ಕುರುಬರು ಸ್ವಂತ ಖರ್ಚಿನಲ್ಲಿ ಸಮಾವೇಶದಲ್ಲಿ ಭಾಗವಹಿಸಿ, ಹೋರಾಟಕ್ಕೆ ಶಕ್ತಿ ತುಂಬಲಿದ್ದಾರೆ ಎಂದು ಹೇಳಿದರು.
ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ‘ಎಸ್ಟಿ ಮೀಸಲಾತಿಗಾಗಿ ಕುರುಬರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವವರ ಪ್ರಸಾದಕ್ಕಾಗಿ ಗದುಗಿನಿಂದ 50 ಸಾವಿರ ರೊಟ್ಟಿಗಳು ಬೆಂಗಳೂರಿಗೆ ಹೋಗಲಿವೆ. ಎಸ್ಟಿಗೆ ಸೇರಿಸುವಂತೆ ಕುರುಬರ ಈ ಹೋರಾಟ ಹೊಸದಲ್ಲ. ಈ ಬಗ್ಗೆ ಹಿಂದೆ ದೇವರಾಜ ಅರಸು ಅವರ ಮೂಲಕ ಕೇಂದ್ರಕ್ಕೆ ಶಿಫಾರಸು ಹೋಗಿತ್ತು. ಆದರೆ, ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಇದು ಆಗಲಿಲ್ಲ’ ಎಂದರು.
ಹಾಲುಮತ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಮುತ್ತು ಜಡಿ, ಸತೀಶ ಗಿಡ್ಡಹನಮಣ್ಣವರ, ಸೋಮನಗೌಡ ಪಾಟೀಲ, ಉಮೇಶ ಪೂಜಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.