ಮುಂಡರಗಿ: ಮಕರ ಸಂಕ್ರಾಂತಿ ನಿಮಿತ್ಯ ತಾಲ್ಲೂಕಿನ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನದ ಬಳಿ ಹರಿದಿರುವ ತುಂಗಭದ್ರಾ ನದಿಯಲ್ಲಿ ಶನಿವಾರ ಮತ್ತು ಭಾನುವಾರ ನೂರಾರು ಜನರು ಪುಣ್ಯಸ್ನಾನ ಮಾಡಿ ವೀರಭದ್ರೇಶ್ವರನ ದರ್ಶನ ಪಡೆದರು.
ಗದಗ, ಬಳ್ಳಾರಿ, ದಾವಣಗೇರೆ, ಹಾವೇರಿ, ಕೊಪ್ಪಳ ಮೊದಲಾದ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಆತ್ಮೀಯರಿಗೆ, ಬಂಧು ಬಳಗದವರಿಗೆ ಎಳ್ಳುಬೆಲ್ಲ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಮಕರ ಸಂಕ್ರಾಂತಿಯ ನಿಮಿತ್ಯ ಮುಂಡರಗಿ ಹಾಗೂ ಹೂವಿನ ಹಡಗಲಿಗಳಿಂದ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನಕ್ಕೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ನದಿಯಾಚೆಗೆ ಇರುವ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮದಲಗಟ್ಟಿ ಆಂಜನೇಯನ ದೇವಸ್ಥಾನದ ಬಳಿಯೂ ನೂರಾರು ಜನರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಆಂಜನೇಯನ ದರ್ಶನ ಪಡೆದರು.
ಕೆಲವು ಜನರು ಶನಿವಾರ ಮತ್ತೆ ಕೆಲವು ಜನರು ಭಾನುವಾರ ಮಕರ ಸಂಕ್ರಾಂತಿಯನ್ನು ಆಚರಿಸಿದ್ದು, ಶಿಂಗಟಾಲೂರ ವೀರ ಭದ್ರೇಶ್ವರ ದೇವಸ್ಥಾನ ಮತ್ತು ಮದಲಗಟ್ಟಿ ಆಂಜನೇಯ ದೇವ ಸ್ಥಾನದಲ್ಲಿ ಎರಡೂ ದಿನವು ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು.