ನರಗುಂದ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸುವರ್ಣ ಭೂಮಿ ಯೋಜನೆಯಲ್ಲಿ ತಮಗೆ ಅನ್ಯಾಯವಾಗಿದೆ; ಅರ್ಹ ಫಲಾನುಭವಿಗಳಿಗೆ ಇದರ ಲಾಭ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ತಾಲ್ಲೂಕಿನ ಹಿರೇಕೊಪ್ಪ ಗ್ರಾಮದ ರೈತರು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, `ತಾಲ್ಲೂಕಿನಲ್ಲಿ ಕಡಿಮೆ ಅರ್ಜಿ ಬಂದಿದ್ದರೂ ನಮಗೆ ಅದರ ಸೌಲಭ್ಯ ದೊರೆತಿಲ್ಲ. ನಮ್ಮ ಪಹಣಿ ಪತ್ರಿಕೆಯಲ್ಲಿ `ಮಲಪ್ರಭಾ ಕಾಲುವೆ~ ಎಂದು ನಮೂದಾಗಿರುವುದನ್ನೇ ಮೊದಲು ಮಾಡಿಕೊಂಡು ನಮ್ಮ ಅರ್ಜಿ ತಿರಸ್ಕರಿಸಿದ್ದಾರೆ. ಆದರೆ ಕಾಲುವೆ ನಿರ್ಮಾಣವಾದಾಗಿನಿಂದ ಕಳೆದ 30 ವರ್ಷಗಳಿಂದ ನಮ್ಮ ಜಮೀನಿಗೆ ನೀರು ಹರಿದಿಲ್ಲ. ಅದರ ಲಾಭವಂತೂ ದೂರ ಉಳಿದ ಮಾತು~ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ರೈತರು ಇದೇ ರೀತಿ ಭೂಮಿ ಹೊಂದಿದ್ದರೂ ಅಂತಹ ರೈತರನ್ನು ಈ ಯೋಜನೆಗೆ ಆಯ್ಕೆ ಮಾಡಿದ್ದು ಕಂಡು ಬಂದಿದೆ. ಆದ್ದರಿಂದ ಕೃಷಿ ಇಲಾಖಾಧಿಕಾರಿಗಳು ಇದರ ಬಗ್ಗೆ ಕೂಡಲೇ ಗಮನಹರಿಸಿ ತಮಗೂ ಈ ಯೋಜನೆ ಲಾಭ ನೀಡಬೇಕು ಎಂದು ಆಗ್ರಹಿಸಿದ್ದಾರೆ. `ನೀರಾವರಿ ಭೂಮಿ ಹೆಸರಿಗೆ ಮಾತ್ರ ಇದೆ.
ಆದರೆ ನೀರಾವರಿ ಲಾಭ ಎಳ್ಳಷ್ಟೂ ಇಲ್ಲ. ಆದ್ದರಿಂದ ನಮ್ಮ ಅರ್ಜಿ ಪರಿಗಣಿಸಿ ಇದರ ಲಾಭ ದೊರೆಯುವಂತೆ ಮಾಡಿಕೊಡಬೇಕು~ ಎಂದು ಬಸವರಾಜ ತಿಮ್ಮಾಪೂರ, ಲಕ್ಷ್ಮಪ್ಪ ಬಿಲ್ಲನವರ, ಕರಿಯಪ್ಪ ಬಿಲ್ಲನವರ, ರಾಮಣ್ಣ ಬಿಡನಾವರ, ಯಲ್ಲಪ್ಪ ಸಜ್ಜಿ ರೊಟ್ಟಿ, ಶಿವಪ್ಪ ಹಾಳಗೊಪ್ಪದ, ಸಿದ್ದಪ್ಪ ಹೂಲಿ, ಹನಮಪ್ಪ ಮಾದರ, ಹುಚ್ಚಪ್ಪ ದೊಡಮನಿ, ನೀಲಪ್ಪ ಮಾದರ, ಸುರೇಶ ಅಂಗಡಿ, ಹನಮಪ್ಪ ಮುರಾರಿ, ಯಮನಪ್ಪ, ಬಸವರಾಜ ಹೊಳೆನ್ನವರ ಸೇರಿದಂತೆ ಹಲವಾರು ರೈತರು ಆಗ್ರಹಿಸಿದ್ದಾರೆ.