ಹಿರೀಸಾವೆ: ನರಸಿಂಹಸ್ವಾಮಿಯ ಪುನರ್ಜನ್ಮದ ಕ್ಷೇತ್ರ ಎಂಬ ಪ್ರತೀತಿ ಇರುವ ಹೋಬಳಿಯ ಬೆಳಗೀಹಳ್ಳಿಯಲ್ಲಿ ಕಂಬದ ನರಸಿಂಹಸ್ವಾಮಿಯ ರಂಗದ ಹಬ್ಬವನ್ನು ಶನಿವಾರದಿಂದ ಒಂದು ವಾರ ಗ್ರಾಮದಲ್ಲಿರುವ ಎಲ್ಲ ಸಮುದಾಯದವರು ಒಟ್ಟುಗೂಡಿ ಭಯ, ಭಕ್ತಿ, ಭಾವದಿಂದ ಆಚರಿಸುತ್ತಾರೆ.
ಶನಿವಾರ (ಮಾ.23) ರಾತ್ರಿ ಬಾಳೆ ಕಂಬವನ್ನು ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಹಬ್ಬ ಮುಗಿಯುವವರೆಗೆ ದೇವರು ಮೆರವಣಿಗೆ ಮಾಡುವ ಬೀದಿಗಳು ಮತ್ತು ರಂಗ ಮಂಟಪದ ಸುತ್ತ ಪಾದರಕ್ಷೆ ಹಾಕಿಕೊಂಡು ತಿರುಗುವಂತಿಲ್ಲ. ಗ್ರಾಮದಲ್ಲಿ ಮಾಂಸಾಹಾರವನ್ನು ಮಾಡುವುದಿಲ್ಲ. ಹಬ್ಬ ಮುಗಿಯುವರೆಗೆ ಗ್ರಾಮಸ್ಥರು ಸೇವಿಸುವುದಿಲ್ಲ.
ನಿತ್ಯ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಜನಪದ ನೃತ್ಯವಾದ ರಂಗದ ಕುಣಿತವನ್ನು ಕುಣಿಯುತ್ತಾರೆ.
ಮಾ.29ರಂದು ಜಾಗರಣೆ ಪ್ರಯುಕ್ತ ದಮ್ಮನಿಂಗಳ, ಹಡೇನಹಳ್ಳಿ, ನಾಗಯ್ಯನಕೊಪ್ಪಲು, ಎಚ್.ಚಿಕ್ಕೋನಹಳ್ಳಿ, ಹೊನ್ನೇನಹಳ್ಳಿ, ಹಿರೀಸಾವೆ ಮತ್ತು ತುರುವೇಕೆರೆ ತಾಲ್ಲೂಕಿನ ಹೊಡಿಕೆಘಟ್ಟ ಸೇರಿದಂತೆ ಹಲವು ಗ್ರಾಮಗಳಿಂದ ಜನರು ಬಂದು ರಂಗ ಕುಣಿಯುತ್ತಾರೆ.
ಹಬ್ಬದ ಪ್ರಯುಕ್ತ ಮಾ.30ರಂದು ಮಧ್ಯಾಹ್ನ 2 ಗಂಟೆಗೆ ಕೆರೆಯ ಪಕ್ಕದಲ್ಲಿರುವ ಅಶ್ವತ್ಥ ವೃಕ್ಷದ ಬಳಿ ಗಂಗಾ ಪೂಜೆ ನೆರವೇರಿಸಿ, ಮಂಡೆ ಮತ್ತು ಬಾಯಿ ಬೀಗದ ಹರಕೆ ಸಲ್ಲಿಸುತ್ತಾರೆ. ಸಂಜೆ 8 ಗಂಟೆಗೆ ಸ್ವಾಮಿಯವರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ನಂತರ ಮೂಡ್ಲಿಗಿರಿಯಪ್ಪನ ಹರಿಸೇವೆ ನಡೆಯುತ್ತದೆ.
ಭಕ್ತರು ಮತ್ತು ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನದ ಆವರಣದಲ್ಲಿ ಸಾಮೂಹಿಕವಾಗಿ ಅಡುಗೆಯನ್ನು ತಯಾರಿಸಿ, 101 ಎಡೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ದೇವರ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ಮಧ್ಯರಾತ್ರಿ ಅನ್ನದಾನ ಮಾಡುವುದು ಹಬ್ಬದ ವಿಶೇಷವಾಗಿದೆ.
40 ಗ್ರಾಮದಲ್ಲಿ ವಾಸ ಇರುವ ಸ್ವಾಮಿಯ ಭಕ್ತರು ಹಬ್ಬದಲ್ಲಿ ಭಾಗಿಯಾಗಿ ಧಾರ್ಮಿಕ ಆಚರಣೆಗೆ ಸಹಕರಿಸುತ್ತಾರೆದೇವರಾಜು ದೇವಸ್ಥಾನದ ಗುಡಿಗೌಡರು ಬೆಳಗೀಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.