ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಶುಂಠಿ ಬೆಳೆಗೆ ಬೆಂಕಿ ರೋಗ, ಬೆಲೆ ಇದ್ದರೂ ರೈತರಿಗೆ ನಷ್ಟ

Published 5 ಡಿಸೆಂಬರ್ 2023, 6:09 IST
Last Updated 5 ಡಿಸೆಂಬರ್ 2023, 6:09 IST
ಅಕ್ಷರ ಗಾತ್ರ

ಹಳೇಬೀಡು: ಕಳೆದ ವರ್ಷ ಮಳೆ ಹೆಚ್ಚಾಗಿದ್ದರಿಂದ ಕೊಳೆ ರೋಗದಿಂದ ಹಾಳಾಗಿದ್ದ ಶುಂಠಿ, ಈ ವರ್ಷ ಮಳೆ ಇಲ್ಲದೇ ಬೆಂಕಿ ರೋಗಕ್ಕೆ ತುತ್ತಾಗಿದೆ. ರೋಗ ನಿಯಂತ್ರಣಕ್ಕೆ ಬಾರದೇ, ಹಳೇಬೀಡು ಭಾಗದಲ್ಲಿ ಅವಧಿಗೆ ಮೊದಲೇ ಶುಂಠಿ ಕಟಾವು ಮಾಡಲಾಗುತ್ತಿದೆ.

ಶುಂಠಿ ಕೃಷಿ ಪರಿಪೂರ್ಣವಾಗಲು ಒಂದು ವರ್ಷ ಹಿಡಿಯುತ್ತದೆ. ಕೆಲವರು ಒಂದೂವರೆ ವರ್ಷದವರೆಗೂ ಜಮೀನಿನಲ್ಲಿ ಶುಂಠಿ ಕಟಾವು ಮಾಡದೇ ಬೆಳೆಸುತ್ತಾರೆ. ಈ ವರ್ಷ ರೋಗ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬಹುತೇಕ ರೈತರು 8 ರಿಂದ 9 ತಿಂಗಳಿಗೆ ಶುಂಠಿ ಕಟಾವು ಮಾಡಿ ಕೈತೊಳೆದು ಕೊಳ್ಳುತ್ತಿದ್ದಾರೆ.

ಬೆಂಕಿ ರೋಗ ನಿಯಂತ್ರಣಕ್ಕಾಗಿ ರೈತರು ಮಾಡುತ್ತಿರುವ ಪ್ರಯತ್ನಗಳು ವಿಫಲವಾಗುತ್ತಿವೆ. ಬರಗಾಲ ಆವರಿಸಿದ್ದರಿಂದ ಉಷ್ಣಾಂಶದಿಂದ ಭೂಮಿ ಸೊರಗಿದೆ. ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಬೆಳೆಗೆ ನಿರುಣಿಸಲು ಸಾಧ್ಯವಾಗಲಿಲ್ಲ. ಎರಡು ದಿನದಿಂದ ಉಂಟಾಗಿರುವ ಮೋಡ ಕವಿದ ವಾತಾವರಣದಿಂದಲೂ ಬೆಳೆಗೆ ತೊಂದರೆ ಆಗಬಹುದು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

60 ಕೆ.ಜಿ. ತೂಕದ ಒಂದು ಚೀಲ ಶುಂಠಿ ₹ 5,200ಕ್ಕೆ ಮಾರಾಟವಾಗುತ್ತಿತ್ತು. ಬೀಜದ ಶುಂಠಿಯ ಬೆಲೆ ₹6ಸಾವಿರ ಮುಟ್ಟಿತ್ತು. ಆದರೆ, ಬೆಲೆ ಈಗ ₹ 4,400 ರಿಂದ ₹4,800ಕ್ಕೆ ಕುಸಿದಿದೆ. ಬೆಲೆ ಇಳಿಕೆಯಾಗುತ್ತಿದ್ದರೂ, ಇಂದಿನ ಬೆಲೆ ರೈತರಿಗೆ ಬಂಪರ್ ಆಗಿದೆ. ಆದರೆ ರೋಗದಿಂದ ಫಸಲು ಕಡಿಮೆಯಾಗಿದ್ದು, ರೈತರಿಗೆ ನಿರೀಕ್ಷಿತ ಪ್ರಮಾಣದ ಹಣ ಕೈಗೆ ಸಿಗುತ್ತಿಲ್ಲ.

‘ಬೆಳೆ ರೋಗಕ್ಕೆ ತುತ್ತಾದರೆ, ಬೆಳವಣಿಗೆ ಕುಂಠಿತವಾಗುತ್ತದೆ. ಇಳುವರಿಯೂ ಕಡಿಮೆಯಾಗುತ್ತದೆ. ಶುಂಠಿ ಬೆಳೆ ರೋಗಮುಕ್ತವಾಗಿದ್ದರೆ ಮಾತ್ರ ಗುಣಮಟ್ಟದ ಅಧಿಕ ಫಸಲು ಪಡೆಲು ಸಾಧ್ಯ’ ಎನ್ನುತ್ತಾರೆ ರೈತ ಬಂಡಾರಿಕಟ್ಟೆ ರಘು.

ಬಿತ್ತನೆ ಮಾಡಿದ 8 ರಿಂದ 9 ತಿಂಗಳಿಗೆ ಶುಂಠಿ ದೃಢವಾಗುತ್ತದೆ. ಈ ಸಮಯದಲ್ಲಿ ಬೆಳೆ ರೋಗಕ್ಕೆ ತುತ್ತಾದರೆ, ಬೆಳವಣಿಗೆ ಆಗುವುದಿಲ್ಲ. ತೂಕ ಕಡಿಮೆಯಾದರೆ, ಹೆಚ್ಚಿನ ಬೆಲೆ ದೊರಕಿದರೂ ರೈತರಿಗೆ ಪ್ರಯೋಜನ ಆಗುವುದಿಲ್ಲ ಎಂಬ ಮಾತು ಬೆಳೆಗಾರರಿಂದ ಕೇಳಿ ಬರುತ್ತಿದೆ.

‘ಫಲವತ್ತಾದ ಒಂದು ಎಕರೆ ಜಮೀನಿನಲ್ಲಿ 60 ಕೆ.ಜಿ. ತೂಕದ 300 ಚೀಲ ಶುಂಠಿ ಉತ್ಪಾದಿಸಬಹುದು. ರೋಗ ಹತೋಟಿಗೆ ಬಂದರೆ ಉತ್ತಮ ಫಸಲು ತೆಗೆಯಬಹುದು. ಬೆಳವಣಿಗೆ ಹಂತದಲ್ಲಿ ರೋಗಗಳು ಕಾಡಿದರೆ ಶುಂಠಿ ಉತ್ಪಾದನೆ ಕುಂಠಿತವಾಗುತ್ತದೆ. ಈಗ ರೋಗ ತಗುಲಿದ ಜಮೀನಿನಲ್ಲಿ 100ರಿಂದ 120 ಚೀಲ ಮಾತ್ರ ಶುಂಠಿ ದೊರಕುತ್ತಿದೆ’ ಎಂದು ಬಂಡಾರಿಕಟ್ಟೆ ರಘು ಹೇಳಿದರು.

ರೋಗ ಬಾಧೆಯಿಂದ ಹಳೇಬೀಡು ಸುತ್ತ ಅವಧಿಗೆ ಮೊದಲೇ ಶುಂಠಿ ಕಟಾವು ನಡೆಯುತ್ತಿದೆ
ರೋಗ ಬಾಧೆಯಿಂದ ಹಳೇಬೀಡು ಸುತ್ತ ಅವಧಿಗೆ ಮೊದಲೇ ಶುಂಠಿ ಕಟಾವು ನಡೆಯುತ್ತಿದೆ
3–4 ತಿಂಗಳು ಮೊದಲೇ ಶುಂಠಿ ಕಟಾವು ಮಾಡುತ್ತಿರುವ ರೈತರು ರೋಗದಿಂದ ಗಡ್ಡೆಯ ಗುಣಮಟ್ಟದ ಬೆಳವಣಿಗೆಗೆ ತೊಡಕು ಒಂದು ಎಕರೆ ಶುಂಠಿ ಬೆಳೆಯಲು ತಗಲುವ ವೆಚ್ಚ ₹5 ಲಕ್ಷ
ಈ ವರ್ಷ ಮಳೆ ಇಲ್ಲದೆ ಅಧಿಕ ಉಷ್ಣಾಂಶದಿಂದ ವಿವಿಧ ಬೆಳೆಗಳು ಸೊರಗುತ್ತಿವೆ. ಸಮ ವಾತಾವರಣ ಇಲ್ಲದೆ ಶುಂಠಿ ಸೊರಗುವುದು ಸಾಮಾನ್ಯವಾಗಿದೆ
ಬಾಲಚಂದ್ರ ರೈತ ಜಿ.ಸಾಣೇನಹಳ್ಳಿ
ರೋಗದ ಕುರಿತು ಪರಿಶೀಲಿಸಲು ಸಹಾಯಕ ತೋಟಗಾರಿಕಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆಯಲ್ಲಿ ರೋಗ ಕಾಣಿಸಿಕೊಂಡಾಗ ರೈತರು ಇಲಾಖೆಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ
ಸೀಮಾ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ
ಫಲವತ್ತಾದ ಜಮೀನಿನಲ್ಲಿ ಶುಂಠಿಗೆ ಬೆಂಕಿ ರೋಗ ಕಾಣಿಸಿಕೊಳ್ಳುವುದಿಲ್ಲ. ಎತ್ತರ ಪ್ರದೇಶದ ಕಲ್ಲು ಮಣ್ಣಿನ ಜಮೀನಿನಲ್ಲಿ ರೋಗ ಬಾಧಿಸುತ್ತಿದೆ. ಜಮೀನಿನ ಆಯ್ಕೆ ಮುಖ್ಯವಾದ ಕೆಲಸ
ಶಿವರಾಜ್ ಗೌರಿಕೊಪ್ಪಲು ಶುಂಠಿ ಜಮೀನು ಗುತ್ತಿಗೆದಾರ
ಶುಂಠಿ ದುಬಾರಿ ವೆಚ್ಚದ ಬೆಳೆ
ಗುತ್ತಿಗೆ ಜಮೀನಿನಲ್ಲಿ ಒಂದು ಎಕರೆ ಶುಂಠಿ ಬೆಳೆಯಲು ₹ 5 ಲಕ್ಷ ವೆಚ್ಚವಾಗುತ್ತದೆ. ಸ್ವಂತ ಜಮೀನಿನಲ್ಲಿ ಬೆಳೆ ಮಾಡುವವರಿಗೆ ಗುತ್ತಿಗೆ ಬಾಬತ್ತು ಒಂದು ಎಕರೆಗೆ ₹ 55ಸಾವಿರ ನೀರಿನ ವೆಚ್ಚ ₹ 40ಸಾವಿರ ಉಳಿಯುತ್ತದೆ. ಒಂದು ವರ್ಷ ಮುಗಿಯುವುದರೊಳಗೆ 5ರಿಂದ 6 ಬಾರಿ ರಸಗೊಬ್ಬರ ಹಾಕಬೇಕು. 7ರಿಂದ 8 ಸಲ ಔಷಧ ಸಿಂಪಡಣೆ ಮಾಡಬೇಕು. ಆಗಾಗ್ಗೆ ಕಳೆ ತೆಗೆಯುತ್ತಿರಬೇಕು. ನೀರು ಹರಿಸಿದಾಗ ಬಿತ್ತನೆ ಮಾಡಿದ ಮಣ್ಣು ಜರುಗಿದರೆ ಸರಿಪಡಿಸುತ್ತಿರಬೇಕು. ಬಿತ್ತನೆಯಿಂದ ಕಟಾವಿನವರೆಗೂ ಕೂಲಿ ಕಾರ್ಮಿಕರ ಅವಲಂಬನೆ ಇಲ್ಲದೇ ಶುಂಠಿ ಬೆಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಶುಂಠಿ ಬೆಳೆಗಾರರು.
ರೋಗ ನಿಯಂತ್ರಣಕ್ಕೆ ಸಲಹೆ
ಶುಂಠಿ ಬೆಳೆಯಲ್ಲಿ ರೋಗ ಕಾಣಿಸಿಕೊಂಡಿರುವ ಕುರಿತು ರೈತರಿಂದ ಮಾಹಿತಿ ಬಂದಿಲ್ಲ. ಶುಂಠಿ ಬೆಳೆಗೆ ಭಾರೀ ಪ್ರಮಾಣದಲ್ಲಿ ಬೆಂಕಿ ರೋಗ ತಗುಲಿರುವುದು ಕಂಡು ಬಂದಿಲ್ಲ. ನಮ್ಮ ವ್ಯಾಪ್ತಿಯಲ್ಲಿ ಜಮೀನುಗಳ ಸುತ್ತಾಟ ನಡೆಸುವ ಸಂದರ್ಭದಲ್ಲಿ ನಾವಾಗಿಯೇ ರೈತರಿಗೆ ಕೆಲವು ರೋಗ ನಿಯಂತ್ರಣಕ್ಕೆ ಕೈಗೊಳ್ಳುವ ಮಾಹಿತಿ ಕೊಟ್ಟಿದ್ದೇವೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಸದಾನಂದ ಕುಂಬಾರ ತಿಳಿಸಿದ್ದಾರೆ. ಕಳೆದ ವರ್ಷ ಮಳೆ ಹೆಚ್ಚಾಗಿದ್ದರಿಂದ ಶುಂಠಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿತ್ತು. ಬೆಳೆಗೆ ಬಿಟ್ಟ ನೀರು ಹೆಚ್ಚಾಗಿ ಹರಿದಾಡಿದಾಗಲೂ ಕೊಳೆ ರೋಗ ಹರಡುತ್ತದೆ. ಗೆಡ್ಡೆ ಮೃದು ಕೊಳೆ ರೋಗ ನಿಯಂತ್ರಣಕ್ಕೆ ರೈತರಿಗೆ ಮಾಹಿತಿ ನೀಡಲಾಗಿದೆ. ಬೆಳೆ ಹೆಚ್ಚಾಗಿರುವುದರಿಂದಲೂ ರೈತರು ಶುಂಠಿ ಕಟಾವು ಮಾಡಿ ಮಾರಾಟ ಮಾಡುತ್ತಿರಬಹುದು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT