ಡೊಳ್ಳು ಕುಣಿತ ಹಾಗೂ ಚಂಡೆ ನೃತ್ಯದೊಂದಿಗೆ ಮೆರವಣಿಗೆ ಸಾಗಿತು. ಮಲ್ಲೇಶ್ವರ ದೇವಾಲಯದಿಂದ ಸಾಗಿದ ಮೆರವಣಿಗೆ ರಂಗನಾಥ ಸ್ವಾಮಿ ದೇವಾಲಯ ವೃತ್ತಕ್ಕೆ ಬಂದು ತಲುಪಿದಾಗ ಭಾರೀ ಸಂಖ್ಯೆಯ ಜನ ಜಮಾಯಿಸಿದ್ದರು. ಬ್ರಾಹ್ಮಣರ ಬೀದಿ, ಹೊಯ್ಸಳ ದೇವಾಲಯ ರಸ್ತೆ ಮುಖಾಂತರ ಸಾಗಿದ ಮೆರವಣಿಗೆ ಬೇಲೂರು ರಸ್ತೆ, ರಾಜನಶಿರಿಯೂರು ವೃತ್ತದಲ್ಲಿ ಚಲಿಸಿ ಮಲ್ಲೇಶ್ವರ ದೇಗುಲಕ್ಕೆ ಬಂದು ಸೇರಿತು.
ಯುವಕರು ಡೊಳ್ಳಿನ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಶ್ವೇತ ವರ್ಣದ ಉಡುಪಿನೊಂದಿಗೆ ಹೆಗಲಿನಲ್ಲಿ ಕೇಸರಿ ಬಣ್ಣದ ಟವೆಲ್ ಧರಿಸಿದ ಹಿರಿಯರು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಅಲಂಕೃತ ಜೋಡೆತ್ತುಗಳು ಠೀವಿಯಿಂದ ಹೆಜ್ಜೆ ಹಾಕಿದವು.