ಹೊಳೆನರಸೀಪುರ: ತಾಲೂಕಿನ ಕಡುವಿನಹೊಸಳ್ಳಿ ಗ್ರಾಮಸ್ಥರು ಚಿಕ್ಕಮ್ಮ, ದೊಡ್ಡಮ್ಮ ಹಬ್ಬವನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಿದರು.
ಕಡುವಿನಹೊಸಳ್ಳಿ ಗ್ರಾಮಸ್ಥರು ಭೀಮನ ಅಮವಾಸ್ಯೆ ನಂತರದ ಮೊದಲ ಮಂಗಳವಾರ ಸಂಪ್ರದಾಯದಂತೆ ಗ್ರಾಮದ ಮಹಿಳೆಯರು ತಂಬಿಟ್ಟಿನ ಆರತಿ ಹಾಗೂ ಹೊಂಬಾಳೆಯ ಕಳಸವನ್ನು ಸಿದ್ದಪಡಿಸಿ, ನಿರ್ವಿಘ್ನವಾಗಿ ಹಬ್ಬ ನೆಡೆಸುವಂತೆ ಮನೆ ದೇವರಿಗೆ ಪ್ರಾರ್ಥಿಸುತ್ತಾರೆ. ನಂತರ ಗ್ರಾಮದಿಂದ ತಂಬಿಟ್ಟಿನ ಆರತಿ ಹಾಗೂ ಹೊಂಬಾಳೆಯ ಕಳಸವನ್ನು ಹೊತ್ತ ಮಹಿಳೆಯರು ಹಾಗೂ ಯುವತಿಯರು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇರುವ ಚಿಕ್ಕಮ್ಮ, ದೊಡ್ಡಮ್ಮ ದೇವಾಲಯಕ್ಕೆ ಬಂದು ಪೂಜೆ ನಡೆಸಿ ಪ್ರಸಾದ ಸ್ವೀಕರಿಸಿ ಕಡುವಿನ ಹೊಸಹಳ್ಳಿಗೆ ತೆರಳಿದರು.
ಗ್ರಾಮದ ಎಲ್ಲಾ ದಿಕ್ಕುಗಳಲ್ಲೂ ಒಂದೊಂದು ಬಲಿ ಸಮರ್ಪಿಸಿ ಮತ್ತೆ ಮನೆಗೊಂದು ಬಲಿ ಅರ್ಪಿಸಿ ಬಂಧು ಬಾಂಧವರಿಗೆ ಊಟ ಬಡಿಸಿ ಸಂಭ್ರಮಿಸುತ್ತಾರೆ. ಗ್ರಾಮದ ದೇವರಾಜ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಣ್ಣ, ಪಾಪಣ್ಣ, ತಮ್ಮಯ್ಯ, ತಿಮ್ಮಯ್ಯ ಅವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಗ್ರಾಮದ ಯುವಕರು ಸಮವಸ್ತ್ರ ತೊಟ್ಟು ತಮಟೆಗೆ ತಕ್ಕಂತೆ ಹೆಜ್ಜೆ ಹಾಕಿ ದಾರಿಯುದ್ದಕ್ಕೂ ಕುಣಿದರು.