ಹಾಸನ: ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಆಗುತ್ತಿದ್ದಂತೆ ಜನರು ಕೊರೊನಾ ಸೋಂಕು ಇರುವುದನೇ ಮರೆತು ಮನೆಗಳಿಂದ ಹೊರ ಬೀಳುತ್ತಿದ್ದಾರೆ. ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದರೂ ಜವಾಬ್ದಾರಿಯೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ.
ಎರಡು ತಿಂಗಳ ನಿರ್ಬಂಧ ತೆರವುಗೊಳಿಸಿ, ಮಾಮೂಲಿನಂತೆ ಎಲ್ಲ ವಾಣಿಜ್ಯ ವಹಿವಾಟು, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಪ್ರಕರಣಗಳು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಜೂನ್ 26ರಿಂದ ಸತತ ಎರಡು ವಾರ ನಿರ್ಬಂಧ ಮುಂದುವರಿಸಿದ್ದ ಜಿಲ್ಲಾಡಳಿತ ವಾರಕ್ಕೆ ಮೂರು ದಿನ ಮಧ್ಯಾಹ್ನವರೆಗೂ ಮಾತ್ರ ಅಗತ್ಯ ವಸ್ತುಗಳ ಮಾರಾಟ, ಖರೀದಿಗೆ ಅವಕಾಶ ನೀಡಿತ್ತು.
ಪ್ರಸ್ತುತ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇಕಡಾ 4.60 ರಷ್ಟಿದೆ. ಹೊಸ ಸೋಂಕಿತರ ಸಂಖ್ಯೆ 150 ರಿಂದ 200 ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಸಾವಿರಕ್ಕಿಂತಲೂ ಹೆಚ್ಚಾಗಿಯೇ ಇದೆ.
ರಸ್ತೆ, ಮಾರುಕಟ್ಟೆ, ವಾಣಿಜ್ಯ ಮಳಿಗೆ, ಬಸ್ ನಿಲ್ದಾಣ, ಹೋಟೆಲ್ ಮುಂತಾದ ಕಡೆ ಜನರುಗುಂಪುಗೂಡುವ ಮೂಲಕ ಪರಸ್ಪರ ಅಂತರವನ್ನೇ ಮರೆತಿದ್ದಾರೆ. ಹಲವರು ಮಾಸ್ಕ್ ಧರಿಸುತ್ತಿಲ್ಲ. ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಜನರ ಸಂಖ್ಯೆ ಹೆಚ್ಚಳಗೊಂಡು ವ್ಯಾಪಾರ, ವಹಿವಾಟು ಜೋರಾಗಿ ನಡೆಯುತ್ತಿದೆ.
ನಗರಸಭೆ ಅಧಿಕಾರಿಗಳು ಮತ್ತು ಪೊಲೀಸರು ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿಲ್ಲ. ಜನರು ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸದೆ, ಮನಬಂದಂತೆ ಓಡಾಡುತ್ತಿದ್ದಾರೆ.
ನಗರ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ತುಸು ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ.
ಪ್ರಸ್ತುತ 635 ಹಳ್ಳಿಗಳಲ್ಲಿ ಕೊರೊನಾ ಸೋಂಕು ಇದೆ. ಅರಕಲಗೂಡು ತಾಲ್ಲೂಕಿನ 7, ಅರಸೀಕೆರೆ 1, ಬೇಲೂರು 4, ಹಾಸನ 6 ಹಾಗೂ ಸಕಲೇಶಪುರ ತಾಲ್ಲೂಕಿನ 1 ಹಳ್ಳಿ ಸೇರಿ ಒಟ್ಟು 19 ಹಳ್ಳಿಗಳಲ್ಲಿ ಸೋಂಕು ಹೆಚ್ಚಳವಾಗಿದೆ. 48 ಗ್ರಾಮಗಳಲ್ಲಿ ಐದಕ್ಕಿಂತ ಹೆಚ್ಚು ಮಂದಿ ಸೋಂಕಿತರಿದ್ದಾರೆ. ಅರಕಲಗೂಡು ತಾಲ್ಲೂಕಿನ ಕೊಣನೂರು ಗ್ರಾಮದಲ್ಲಿ ನಲ್ವತ್ತಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಉಂಟು ಮಾಡಿದೆ.