ಹಾಸನ: ಜಿಲ್ಲೆಯಲ್ಲಿ ಹೊಸದಾಗಿ ಬುಧವಾರ 226 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ಐದು ಸಾವಿರ (5224) ದಾಟಿದೆ. 7 ಜನರ ಸಾವಿನೊಂದಿಗೆ ಮೃತರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಚೇತರಿಸಿಕೊಂಡ 148 ಜನರು ಆಸ್ಪತ್ರೆಯಿಂದ ಮನೆಗೆ ಮರಳಿದ್ದು, ಈವರೆಗೆ 3318 ಜನರು ಬಿಡುಗಡೆಯಾಗಿದ್ದಾರೆ. 1756 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 60 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಾಗಿ ಅರಸೀಕೆರೆ 45, ಚನ್ನರಾಯಪಟ್ಟಣ 14, ಆಲೂರು 4, ಹಾಸನ 80, ಹೊಳೆನರಸೀಪುರ 25, ಅರಕಲಗೂಡು 31, ಬೇಲೂರು 20, ಸಕಲೇಶಪುರ ತಾಲ್ಲೂಕಿನ 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಆಸ್ಪತ್ರೆಗೆ ಕರೆತರುವ ಮುನ್ನವೇ 14 ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ಆದ್ದರಿಂದ ಸಾರ್ವಜನಿಕರು ಕೆಮ್ಮು, ಜ್ವರ, ನೆಗಡಿ ಅಂತಹ ಲಕ್ಷಣಗಳಿದ್ದರೆ ಹತ್ತಿರದ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಡಬೇಕು’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.
ಆಸ್ಪತ್ರೆಗೆ ತಡವಾಗಿ ಬರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಚಿಕಿತ್ಸಗೆ ಸ್ಪಂದಿಸದೆ ಮೃತಪಡುತ್ತಿದ್ದಾರೆ. ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ ದೇಹದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಆಗುವುದು ಗೊತ್ತಾಗುವುದಿಲ್ಲ. ಆಕ್ಸಿಜನ್ ಪ್ರಮಾಣ ಶೇಕಡಾ 95ಕ್ಕಿಂತ ಕಡಿಮೆ ಇರಬಾರದು ಎಂದರು.