ಸಕಲೇಶಪುರ: ಕಾಡಾನೆ ಮನೆ ಅಂಗಳಕ್ಕೆ ನುಗ್ಗಿ ಸೊಂಡಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಭಾನುವಾರ ಸಂಜೆ ತಾಲ್ಲೂಕಿನ ಮಠಸಾಗರ ಗ್ರಾಮದಲ್ಲಿ ನಡೆದಿದೆ.
ವೇಗವಾಗಿ ಬಂದ ಸಲಗ ಅಂಗಳದಲ್ಲಿದ್ದ ಭೋಜಪ್ಪ ಅವರನ್ನು ಸೊಂಡಿಲಿನಿಂದ ತಳ್ಳಿ ಕೆಳಗೆ ಬೀಳಿಸಿದೆ. ಆಗ ಮನೆಯಲ್ಲಿದ್ದವರು ಹೆದರಿ ಕೂಗಾಡಿದ್ದಾರೆ. ಕೂಗಿಗೆ ಆನೆ ಓಡಿ ಪಕ್ಕದ ಕಾಫಿ ತೋಟದೊಳಗೆ ಮರೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.
ಬೆನ್ನಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಇಲ್ಲಿಯ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆರ್ಎಫ್ಓ ರಾಘವೇಂದ್ರ ಅಗಸೆ ಹಾಗೂ ಸಿಬ್ಬಂದಿ ಹಾಸನಕ್ಕೆ ಕರೆದುಕೊಂಡು ಹೋಗಿದ್ದಾರೆ.
ಮೂರು ವರ್ಷದಿಂದ ಕಾಡಾನೆಗಳು ಮಠಸಾಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಅಲೆದಾಡುತ್ತಿದ್ದು, ಆನೆ ದಾಳಿಯಿಂದ ಎರಡು ವರ್ಷದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದರಿಂದ ಜನರು ಸಂಚರಿಸಲು ಹೆದರುತ್ತಿದ್ದಾರೆ.