ಹಾಸನ: ಗ್ರಾಮಕ್ಕೆ ಗೋಮಾಳ ಉಳಿಸುವಂತೆ ಕೌಶಿಕ ಗ್ರಾಮಸ್ಥರು ದನ ಕರುಗಳು, ಎತ್ತಿನ ಗಾಡಿಯೊಂದಿಗೆ ನಗರಕ್ಕೆ ಬಂದು ಪ್ರತಿಭಟನೆ ನಡೆಸಿದರು. ರೈಲು ನಿಲ್ದಾಣದಲ್ಲಿ ಎತ್ತಿನಗಾಡಿ, ದನಕರುಗಳನ್ನು ಬಿಟ್ಟು, ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದ ಗ್ರಾಮಸ್ಥರು, ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದ ಸಚಿವರು ಸ್ಥಳಕ್ಕೆ ಬಂದು ಮನವಿಗೆ ಸ್ಪಂದಿಸಬೇಕು ಎಂದು ಘೋಷಣೆ ಕೂಗಿದದರು. ನಂತರ ಸ್ಥಳಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ‘ಈ ವಿಚಾರ ನನ್ನ ಗಮನಕ್ಕೆ ತಂದಿದ್ದೀರಿ. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
20 ವರ್ಷಗಳ ಹಿಂದೆ ಕೆಐಎಡಿಬಿಗೆ ಗೋಮಾಳ ಭೂಮಿಯನ್ನು ಹಸ್ತಾಂತರ ಮಾಡಲಾಗಿದೆ. ಮತ್ತೆ ಗ್ರಾಮಕ್ಕೆ ಗೋಮಾಳ ಬಿಡುವ ಬಗ್ಗೆ ಕಾನೂನಿನ ತೊಡಕಿದ್ದು, ಮೊದಲು ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಪ್ರತಿಕ್ರಿಯೆ ನೀಡುವುದಾಗಿ ಗೋಪಾಲಯ್ಯ ತಿಳಿಸಿದರು.
ಈ ನಡುವೆ ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, 20 ವರ್ಷಗಳಿಂದ ಕೈಗಾರಿಕೆ ಉದ್ದೇಶಕ್ಕೆ ಭೂಮಿಯನ್ನು ಬಳಸಿಕೊಂಡಿಲ್ಲ. ಅಗತ್ಯವಾಗಿರುವ ಗ್ರಾಮದ ಜನರಿಗೆ ಗೋಮಾಳವನ್ನು ಬಿಟ್ಟು ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
₹ 50 ಸಾವಿರಕ್ಕೆ ಗೋಮಾಳದ ಜಾಗವನ್ನು ಪಡೆದು, ₹20 ಲಕ್ಷಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಸಚಿವರ ಗಮನಕ್ಕೆ ತಂದ ರೇವಣ್ಣ, ಗ್ರಾಮದ ದನಕರುಗಳು ಮೇಯಲು ಅಗತ್ಯವಿರುವ ಗೋಮಾಳ ಮಂಜೂರು ಮಾಡಿಸಿ ಕೊಡುವಂತೆ ಒತ್ತಾಯಿಸಿದರು.