ಅರಸೀಕೆರೆ: ‘ರಾಜಭೀತಿ, ಯುದ್ಧ ಭೀತಿ ಸೇರಿದಂತೆ ಲೋಕ ಕಂಟಕ, ಪ್ರಾದೇಶಿಕ ಕಂಟಕ, ಭೂಕಂಪದಂತಹ ಕಂಟಕಗಳು ಮನುಕುಲದ ಮೇಲೆ ದುಷ್ಪರಿಣಾಮ ಬೀರಲಿವೆ. ಮುಂದಿನ 3 ತಿಂಗಳು ಜಾಗರೂಕತೆಯಿಂದ ಇರಬೇಕು’ ಎಂದು ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದಲ್ಲಿ ಲೋಕಾ ಕಲ್ಯಾಣಾರ್ಥ ಹಮ್ಮಿಕೊಂಡಿದ್ದ ಮಹಾರುದ್ರ ಯಾಗ ವನ್ನು ಮುಗಿಸಿದ ಬಳಿಕ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪ್ರಾಕೃತಿಕ ವಿಕೋಪಗಳ ಭೀತಿ ಜತೆಗೆ ಮನುಷ್ಯರು ಪರಸ್ಪರ ಅಪನಂಬಿಕೆಯಿಂದ ತನ್ನ ಮಾನಸಿಕ ಸ್ಥಿರತೆ ಕಳೆದುಕೊಂಡು ಹುಚ್ಚರಂತೆ ವರ್ತಿಸುವುದು ಹಾಗೂ ದೇಹದ ಅಶಕ್ತತೆ ಯಿಂದ ಬೀದಿಯಲ್ಲಿ ಮೃತಪಡುವ ಕಾಲ ಬರಲಿದೆ. ಈ ಕಂಟಕಗಳಿಂದ ಪಾರಾಗಲು ಜನರು ದೈವದ ಮೊರೆ ಹೋಗಬೇಕು’ ಎಂದು ಹೇಳಿದರು.