ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಳ ಬಾಯಲ್ಲಿ ನೀರೂರಿಸಿದ ಖಾದ್ಯಗಳು

ಹಾಸನ ಪಿಯು ಕಾಲೇಜಿನಲ್ಲಿ ಆಹಾರ: ಆಹಾರ ಅಪವ್ಯಯ ಮಾಡದಿರಲು ಸಲಹೆ
Published 28 ಡಿಸೆಂಬರ್ 2023, 12:43 IST
Last Updated 28 ಡಿಸೆಂಬರ್ 2023, 12:43 IST
ಅಕ್ಷರ ಗಾತ್ರ

ಅರಕಲಗೂಡು: ಆಹಾರವನ್ನು ಅಪವ್ಯಯ ಮಾಡುವುದು ಕಷ್ಟಪಟ್ಟು ಬೆಳೆ ಉತ್ಪಾದಿಸುವ ರೈತನಿಗೆ ಅಪಮಾನ ಮಾಡಿದಂತೆ. ಊಟಕ್ಕೆ ಮುನ್ನ ಅನ್ನದಾತನನ್ನು ಸ್ಮರಿಸುವ ಮೂಲಕ ಆತನನ್ನು ಗೌರವಿಸುವ ಪರಿಪಾಠವನ್ನು ಸಮಾಜ ರೂಢಿಸಿಕೊಳ್ಳಬೇಕು ಎಂದು ಹಾಸನ ಪಿಯು ಕಾಲೇಜು ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು.

ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಆಹಾರ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನ ಬದುಕು ನಿಂತಿರುವುದೇ ಆಹಾರದ ಮೇಲೆ, ಆದರೆ ಅದನ್ನು ಉತ್ಪಾದಿಸುವ ರೈತನಿಗೆ ಉತ್ತಮ ಆದಾಯ ಹಾಗೂ ಸಮಾಜದಲ್ಲಿ ಗೌರವ ದೊರಕುತ್ತಿಲ್ಲ. ರೈತ ವೃತ್ತಿ ಅವಲಂಭಿಸಿರುವ ಯುವಕರಿಗೆ ಹೆಣ್ಣು ದೊರಕದ ಪರಿಸ್ಥಿತಿ ಉಂಟಾಗಿರುವುದು ಶೋಚನೀಯ ಸಂಗತಿ, ಈ ಕುರಿತು ಸಮಾಜ ಚಿಂತನೆ ನಡೆಸಬೇಕಿದೆ ಎಂದರು.

ಕ್ರಿಸ್ತಜ್ಯೋತಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಸಿ.ಎಸ್. ಪುನೀತ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲ ಪಿ. ನವೀನ್ ಉಲಿವಾಲ, ತಿಪಟೂರು ಟೈಮ್ಸ್ ಕಾಲೇಜು ಪ್ರಾಂಶುಪಾಲ ಅನೂಪ್ ಕುಂದೂರು, ಉಪನ್ಯಾಸಕರಾದ ಕೃಷ್ಣ ಮೂರ್ತಿ, ನಂದೀಶ್,ಸಾನಿಯಾ, ರಾಕೇಶ್,ಹೇಮಾ, ಉದಯ್, ಮಧು ಇದ್ದರು.

ಮೇಳದಲ್ಲಿ ವಹಿವಾಟು ನಡೆಸಿದ 13 ವಿದ್ಯಾರ್ಥಿಗಳ ತಂಡ ಪಾನಿಪೂರಿ, ಪ್ರೈಡ್ ರೈಸ್, ಗೀರೈಸ್, ಹೋಳಿಗೆ, ಪಾವ್ ಬಾಜಿ, ಬೋಂಡ, ಸಮೋಸ, ಮೀನು, ಮೊಟ್ಟೆ, ಬಿರಿಯಾನಿ, ಬೇಲ್ ಪೂರಿ ಮುಂತಾದ ಬಾಯಲ್ಲಿ ನೀರೂರಿಸುವಂತಹ ಖಾದ್ಯಗಳನ್ನು ತಯಾರಿಸಿ ಗ್ರಾಹಕರನ್ನು ಆಕರ್ಷಿಸಿತು.

ಐಸ್ ಕ್ರೀಂ, ಎಳನೀರು, ತಂಪು ಪಾನೀಯಗಳ ಮಾರಾಟವೂ ಬಿರುಸಿನಿಂದ ನಡೆಯಿತು. ಮೇಳದಲ್ಲಿ ₹ 70 ಸಾವಿರ ಬಂಡವಾಳ ತೊಡಗಿಸಿ ₹1 ಲಕ್ಷದ ವಹಿವಾಟು ನಡೆಸಲಾಯಿತು. ₹ 5 ಸಾವಿರ ಬಂಡವಾಳ ತೊಡಗಿಸಿ ₹ 8 ಸಾವಿರ ವಹಿವಾಟು ನಡೆಸಿದ ಸಾಕೀಬ್ ಮತ್ತು ಶ್ರೀಶಾಂತ್ ನೇತೃತ್ವದ ಬಿರಿಯಾನಿ ಪ್ಯಾರಡೈಸ್ ತಂಡ ಪ್ರಥಮ ಹಾಗೂ ₹ 3 ಸಾವಿರ ಹಣ ಹೂಡಿ ₹ 5 ಸಾವಿರ ವ್ಯಾಪಾರ ನಡೆಸಿದ ಕಿರಣ್ ಮತ್ತು ಶ್ರವಂತ್ ನೇತೃತ್ವದ ಕನ್ನಡಿಗರ ರೆಸಿಪಿ ತಂಡ ದ್ವಿತೀಯ ಸ್ಥಾನಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT