ಹಾಸನ: ಹುಬ್ಬಳ್ಳಿಯ ನಡೆದ ಅಂಜಲಿ ಹತ್ಯೆಯನ್ನು ಖಂಡಿಸಿ ಮತ್ತು ಸೂಕ್ತ -ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಜಿಲ್ಲಾ ಗಂಗಾಮತಸ್ಥ(ಬೆಸ್ತ)ರ ಸಮುದಾಯದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು, ಜಿಲ್ಲಾಧಿಕಾರಿ ಕಚೇರಿ ಎಂದು ಕೆಲಕಾಲ ಧರಣಿ ನಡೆಸಿದರು.
ಸಂಘದ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಎಚ್.ಕೆ. ಗೋಪಾಲ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿದ್ದು, ಇತ್ತೀಚೆಗೆ ವಿದ್ಯಾರ್ಥಿನಿ ನೇಹಾ ಹೀರೇಮಠ ಹತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿ ನಗರದ ವೀರಾಪುರದ ಓಣಿಯ ಯುವತಿ ಅಂಜಲಿ ಮೋಹನ ಅಂಬಿಗೇರ ಅವಳನ್ನು ಪ್ರೀತಿಸುತ್ತಿದ್ದ ಎನ್ನಲಾದ ಯಲ್ಲಾಪುರ ಓಣಿಯ ವಿಶ್ವನಾಥ ಗಿರೀಶ ಸಾವಂತನು ಮನೆಗೆ ನುಗ್ಗಿ ಕುಟುಂಬದ ಸದಸ್ಯರ ಸಮ್ಮುಖದಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಹೇಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆತನನ್ನು ಈಗಾಗಲೇ ಬಂಧಿಸಿರುವುದು ಸಮಾಧಾನಕರ ವಿಷಯ. ಆದರೆ, ಶೀಘ್ರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಎಚ್.ಅರ್. ನಾಗರಾಜ್, ಮಂಜಣ್ಣ, ಸುಬ್ಬಣ್ಣ, ವಜ್ರುಮುನಿ, ಮಂಜುನಾಥ್, ರಘು, ಪ್ರಕಾಶ್, ಪದ್ಮ, ಜಯಮ್ಮ, ಸುಮಿತ್ರ, ಮಂಜುಳಾ, ವೀಣಾ, ಶಾಂತಲಾ ಇದ್ದರು.