ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ದಿಕ್ಕಿಗೊಂದು ಸರ್ಕಾರಿ ಕಚೇರಿ: ತಪ್ಪದ ಜನರ ಅಲೆದಾಟ

Published 18 ಡಿಸೆಂಬರ್ 2023, 6:34 IST
Last Updated 18 ಡಿಸೆಂಬರ್ 2023, 6:34 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾ ಕೇಂದ್ರದಲ್ಲಿ ಯಾವುದೇ ಕೆಲಸ ಆಗಬೇಕಾದರೆ, ಊರೆಲ್ಲ ಸುತ್ತಾಡುವುದು ಅನಿವಾರ್ಯವಾಗಿದೆ. ದಿಕ್ಕಿಗೊಂದು ಸರ್ಕಾರಿ ಕಚೇರಿಗಳಿದ್ದು, ಜನರು ನಿತ್ಯ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡುವುದು ಮಾತ್ರ ತಪ್ಪಿಲ್ಲ.

ನಗರದ ಎನ್‌.ಆರ್. ವೃತ್ತದಲ್ಲಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಕಚೇರಿಗಳಿವೆ. ನಗರಸಭೆ, ಕೃಷಿ ಇಲಾಖೆ, ಎಪಿಎಂಸಿಗಳು ಸಂತೇಪೇಟೆಯಲ್ಲಿವೆ. ಸಮಾಜ ಕಲ್ಯಾಣ ಇಲಾಖೆ ಒಂದೆಡೆ ಇದ್ದರೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಳು ಮತ್ತೊಂದೆಡೆ. ಇನ್ನುಳಿದ ಜಿಲ್ಲಾ ಮಟ್ಟದ ಕಚೇರಿಗಳು ಮಾರುದ್ದ ದೂರದಲ್ಲಿವೆ. ಒಂದು ಕಚೇರಿಯಲ್ಲಿ ಕೆಲಸ ಮುಗಿಸಿ, ಮತ್ತೊಂದು ಕಚೇರಿಗೆ ಹೋಗಬೇಕಾದರೆ, ಕನಿಷ್ಠ ₹50 ಖರ್ಚು ಮಾಡಲೇಬೇಕು ಎನ್ನುವ ಪರಿಸ್ಥಿತಿ ಇದೆ.

ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಲೇ ಇದ್ದು, ಒಂದೇ ಸೂರಿನಲ್ಲಿ ಎಲ್ಲ ಕಚೇರಿಗಳು ಯಾವಾಗ ಲಭ್ಯವಾಗಲಿವೆ ಎನ್ನುವ ಪ್ರಶ್ನೆಯನ್ನು ಜನರು ಕೇಳುತ್ತಲೇ ಇದ್ದಾರೆ.

ಇನ್ನು ಮೂಲಸೌಕರ್ಯಗಳಂತೂ ದೂರದ ಮಾತು ಎನ್ನುವಂತಾಗಿದೆ. ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ, ಸರ್ಕಾರಿ ಕಚೇರಿ ಸೇರಿದಂತೆ ಬಹುತೇಕ ಉತ್ತಮ ಕಟ್ಟಡಗಳನ್ನು ಹೊಂದಿದ್ದರೂ, ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಇಲಾಖೆಗಳು ವಿಫಲವಾಗಿವೆ. ಬಹುತೇಕ ಕಚೇರಿಗಳಲ್ಲಿ ಅಂಗವಿಕಲರಿಗಾಗಿ ರ‍್ಯಾಂಪ್‌, ಸಿಬ್ಬಂದಿ, ಸಾರ್ವಜನಿಕರಿಗೆ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯಗಳು ದೊರೆಯಬೇಕಾಗಿದೆ.

ಬಹುತೇಕ ಕಚೇರಿಗಳಿಗೆ ತೆರಳಲು ಜನರು ಮೆಟ್ಟಿಲುಗಳನ್ನು ಹತ್ತಿ ಅಧಿಕಾರಿಗಳನ್ನು ಭೇಟಿ ಮಾಡುವ ಪರಿಸ್ಥಿತಿ ಇದೆ. ಅಶಕ್ತರು, ವೃದ್ಧರು, ಅಂಗವಿಕಲರು ಈ ಕಚೇರಿಗಳಿಗೆ ತಲುಪಲು ಹರಸಾಹಸ ಪಡಬೇಕಾಗಿದೆ. ಜಿಲ್ಲಾ ಪಂಚಾಯಿತಿ ಸಂಕೀರ್ಣದಲ್ಲಿ ಲಿಫ್ಟ್ ಸೌಲಭ್ಯ ಇರುವುದರಿಂದ ಜನರು ಹೆಚ್ಚಿನ ಶ್ರಮಪಡಬೇಕಾಗಿಲ್ಲ. ಇಲ್ಲೂ ಶೌಚಾಲಯ ಹಾಗೂ ಕುಡಿಯುವ ನೀರು ಸೌಲಭ್ಯ ಕೇವಲ ಸಿಬ್ಬಂದಿಗೆ ಇದ್ದು, ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳ ಕೊರತೆ ಇದೆ.

ನಗರಸಭೆ ಕಾರ್ಯಾಲಯದಲ್ಲಿ ಶೌಚಾಲಯದ ಕೊರತೆಯಿದ್ದು, ಕುಡಿಯುವ ನೀರಿಗೂ ತತ್ವಾರವಿದೆ. ಇಡೀ ನಗರಕ್ಕೆ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸುವ ನಗರಸಭೆ ಕಚೇರಿಯಲ್ಲಿಯೇ ಈ ಅವ್ಯವಸ್ಥೆ ಕಂಡು ಬಂದಿದೆ.

ಹಿರೀಸಾವೆ ಹೋಬಳಿಯ ಬಹುತೇಕ ಸರ್ಕಾರಿ ಕಚೇರಿಗಳ ಬಳಿ ಸಾರ್ವಜನಿಕರಿಗೆ ಶೌಚಾಲಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಮೂಲಸೌಲಭ್ಯಗಳು ಇಲ್ಲ. ಹೋಬಳಿ ಕೇಂದ್ರದಲ್ಲಿರುವ ನಾಡಕಚೇರಿ, ಸಾರ್ವಜನಿಕರ ಆಸ್ಪತ್ರೆ, ಪಶು ಆಸ್ಪತ್ರೆ, ಗ್ರಾಮ ಪಂಚಾಯಿತಿ, ಕೃಷಿ ಪತ್ತಿನ ಸಹಕಾರ ಸಂಘ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್‌ಗಳು, ಹೋಬಳಿಯ ಬಹುತೇಕ ಪಂಚಾಯಿತಿ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾರ್ವಜನಿಕರಿಗೆ 20 ಲೀಟರ್ ಕ್ಯಾನ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದೆ. ಆದರೆ ಯಾವುದೇ ಕಚೇರಿ ಬಳಿ ಸಾರ್ವಜನಿಕ ಶೌಚಾಲಯ ಇಲ್ಲದೇ, ಜನರಿಗೆ ತೊಂದರೆಯಾಗಿದೆ. ಅಂಗವಿಕಲರ ರ‍್ಯಾಂಪ್‌ ಕೆಲವು ಕಚೇರಿಗಳ ಬಳಿ ಇದೆ.

ಹಳೇಬೀಡಿನ ನಾಡಕಚೇರಿ ಪ್ರವಾಸಿ ಮಂದಿರದಲ್ಲಿದ್ದರೆ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಹೊಯ್ಸಳ ಬಡಾವಣೆಯಲ್ಲಿದೆ. ಸಾರ್ವಜನಿಕರು ಕಂದಾಯ ಇಲಾಖೆಯ ಕೆಲಸಕ್ಕೆ ತಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿ ಭೇಟಿ ಮಾಡಿದ ನಂತರ, ಉಪ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರನ್ನು ಭೇಟಿ ಮಾಡಬೇಕಾಗುತ್ತದೆ. ಕಂದಾಯ ನೌಕರರನ್ನು ಭೇಟಿ ಮಾಡಲು ಎರಡು ಕಡೆ ಅಲೆದಾಡುವಂತಾಗಿದೆ.

ಗ್ರಾಮ ಲೆಕ್ಕಿಗರ ಕಚೇರಿ ಹಾಗೂ ನಾಡಕಚೇರಿ ಒಂದೇ ಸ್ಥಳದಲ್ಲಿದ್ದರೆ, ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ ಎಂಬ ಮಾತು ರೈತರಿಂದ ಕೇಳಿ ಬರುತ್ತಿದೆ. ಹಳೇಬೀಡಿನ ನಾಡಕಚೇರಿಯನ್ನು ಪ್ರವಾಸಿಮಂದಿರಕ್ಕೆ ಸ್ಥಳಾಂತರ ಮಾಡಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಹೊಳೆನರಸೀಪುರ ತಾಲ್ಲೂಕು ಕಚೇರಿಯಲ್ಲಿ ಸ್ಥಳಾವಕಾಶ ಇಲ್ಲದಿದ್ದರೂ ನೀರು, ಶೌಚಾಲಯ ವ್ಯವಸ್ಥೆ ಉತ್ತಮವಾಗಿದೆ. ಅಂಗವಿಕಲರಿಗೆ ರ‍್ಯಾಂಪ್‌ ಮಾಡಲಾಗಿದೆ. ಮೊದಲ ಮಹಡಿಯಲ್ಲಿ ಸರ್ವೇಯರ್‌ಗಳ ಕೊಠಡಿ ಇದೆ. ತಾಲ್ಲೂಕಿನಲ್ಲಿ 16 ಜನ ಸರ್ಕಾರಿ ಸರ್ವೇಯರ್‌ಗಳು ಹಾಗೂ 29 ಜನ ತರಬೇತಿ ಪಡೆದ ಸರ್ವೇಯರ್‌ಗಳಿದ್ದಾರೆ. ಆದರೆ ಇವರೆಲ್ಲರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಇಲ್ಲದಿದ್ದರೂ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಪರಶಿವನಾಯಕ ದಾಖಲೆಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ.

ಇದೇ ಆವರಣದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜನರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಇಲ್ಲ. ಆದರೆ ಒಳಗಡೆ ಅಗತ್ಯಕ್ಕೆ ತಕ್ಕಷ್ಟು ಕಂಪ್ಯೂಟರ್, ಸಿಬ್ಬಂದಿ, ಯುಪಿಎಸ್‌ಗಳಿದ್ದು ಶೌಚಾಲಯ ವ್ಯವಸ್ಥೆಯೂ ಇದೆ. ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಲೆಕ್ಕಿಗರು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಚೇರಿಗಳನ್ನು ತೆರೆದಿದ್ದು, ಅವರನ್ನು ಹುಡುಕಿಕೊಳ್ಳುವುದೇ ಕಷ್ಟವಾಗಿದೆ. ಅವರೆಲ್ಲರೂ ತಾಲ್ಲೂಕು ಕಚೇರಿಯಲ್ಲೇ ಸ್ಥಳಾವಕಾಶ ಕಲ್ಪಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ಚನ್ನರಾಯಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ರ‍್ಯಾಂಪ್‌ ಸವಲತ್ತು ಹಾಗೂ ಲಿಫ್ಟ್ ಸೌಲಭ್ಯ ಇದೆ. ತಾಲ್ಲೂಕು ಕಚೇರಿ ಆವರಣದಲ್ಲಿ ಪುರಸಭೆ ವತಿಯಿಂದ ನಿರ್ಮಿಸಿರುವ ಸುಲಭ್ ಶೌಚಾಲಯ ಇದೆಯಾದರೂ ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ.

ಕಚೇರಿಯಲ್ಲಿ ಕುಡಿಯುವ ನೀರು ಸೌಲಭ್ಯ ಇದೆ. ಆದರೆ ತಾಲ್ಲೂಕು ಕಚೇರಿ ಆವರಣದ ಪ್ರವೇಶದ್ವಾರದ ಪಕ್ಕದ ಗೇಟ್ ಬಳಿ ಶುದ್ಧ ಕುಡಿಯುವ ನೀರಿನ ಘಟಕ ವ್ಯವಸ್ಥೆ ಮಾಡಲಾಗಿದ್ದರೂ ಉಪಯೋಗಕ್ಕೆ ಇಲ್ಲದಂತಾಗಿದೆ. ಅರ್ಜಿ ವಿಲೇವಾರಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷಿ ಇಲಾಖೆಯಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಕರ್ಯ ಇದೆ.

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಸಿ.ಬಿ. ಸಂತೋಷ್‌, ಎಚ್‌.ವಿ. ಸುರೇಶ್‌ಕುಮಾರ್, ಎಂ.ಪಿ.ಹರೀಶ್‌, ಸಿದ್ದರಾಜು, ಹಿ.ಕೃ. ಚಂದ್ರು, ಎಚ್‌.ಎಸ್‌. ಅನಿಲ್‌ಕುಮಾರ್‌.

ಹೊಳೆನರಸೀಪುರದ ಭೂದಾಖಲೆಗಳ ಇಲಾಖೆಯಲ್ಲಿ ಸರ್ವೇಯರ್‌ಗಳೂ ಕುಳಿತುಕೊಳ್ಳಲು ಜಾಗದ ಕೊರತೆ ಇದೆ
ಹೊಳೆನರಸೀಪುರದ ಭೂದಾಖಲೆಗಳ ಇಲಾಖೆಯಲ್ಲಿ ಸರ್ವೇಯರ್‌ಗಳೂ ಕುಳಿತುಕೊಳ್ಳಲು ಜಾಗದ ಕೊರತೆ ಇದೆ
ಹಿರೀಸಾವೆಯ ನಾಡಕಚೇರಿ
ಹಿರೀಸಾವೆಯ ನಾಡಕಚೇರಿ
ಶಿಥಿಲಾವಸ್ಥೆಯಲ್ಲಿರುವ ಹಳೇಬೀಡಿನ ನಾಡಕಚೇರಿ ಕಟ್ಟಡ
ಶಿಥಿಲಾವಸ್ಥೆಯಲ್ಲಿರುವ ಹಳೇಬೀಡಿನ ನಾಡಕಚೇರಿ ಕಟ್ಟಡ
ಹಾಸನದ ನಗರಸಭೆ ಆವರಣದ ಮಧ್ಯದಲ್ಲಿಯೇ ವಾಹನಗಳ ಪಾರ್ಕಿಂಗ್‌ ಮಾಡಲಾಗುತ್ತಿದೆ
ಹಾಸನದ ನಗರಸಭೆ ಆವರಣದ ಮಧ್ಯದಲ್ಲಿಯೇ ವಾಹನಗಳ ಪಾರ್ಕಿಂಗ್‌ ಮಾಡಲಾಗುತ್ತಿದೆ
ಹಾಸನದಲ್ಲಿ ಇರುವ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಶಿಥಿಲವಾಗಿದೆ
ಹಾಸನದಲ್ಲಿ ಇರುವ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಶಿಥಿಲವಾಗಿದೆ
ಹಾಸನ ತಾಲ್ಲೂಕು ಪಂಚಾಯಿತಿ ಕಚೇರಿಗೆ ಭೇಟಿ ನೀಡಲು ಮೆಟ್ಟಿಲು ಹತ್ತಬೇಕಿದೆ
ಹಾಸನ ತಾಲ್ಲೂಕು ಪಂಚಾಯಿತಿ ಕಚೇರಿಗೆ ಭೇಟಿ ನೀಡಲು ಮೆಟ್ಟಿಲು ಹತ್ತಬೇಕಿದೆ
ಚನ್ನರಾಯಪಟ್ಟಣ ತಾಲ್ಲೂಕು ಕಚೇರಿಯಲ್ಲಿ ರ‍್ಯಾಂಪ್‌ ಅಳವಡಿಸಲಾಗಿದೆ
ಚನ್ನರಾಯಪಟ್ಟಣ ತಾಲ್ಲೂಕು ಕಚೇರಿಯಲ್ಲಿ ರ‍್ಯಾಂಪ್‌ ಅಳವಡಿಸಲಾಗಿದೆ
ಶೌಚಾಲಯ ನಿರ್ಮಾಣ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬರುವ ಸಾರ್ವಜನಿಕರಿಗಾಗಿ ಮಂದಿನ ದಿನಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುವುದು. ಹರೀಶ್ ಪಿಎಸಿಸಿ ಸಿಇಒ ಹಿರೀಸಾವೆ ಒಂದೇ ಸೂರಿನಡಿ ಕಂದಾಯ ಇಲಾಖೆ ವೇತನಗಳ ಮಂಜೂರಾತಿ ದೃಢೀಕರಣ ವಿತರಣೆ ಜಮೀನು ದಾಖಲೆಯ ಕೆಲಸ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕಂದಾಯ ಇಲಾಖೆ ಪ್ರಮುಖ ಪಾತ್ರವಹಿಸಬೇಕು. ಕಂದಾಯ ನೌಕರರು ಒಂದೇ ಸೂರಿನಡಿ ಸಿಗುವಂತಾಗಬೇಕು.
ಶಿವಶಂಕರಪ್ಪ ರೈತ ರಾಜಗೆರೆ ಹಳೇಬೀಡು
ನೀರಿಗೆ ತೊಂದರೆ ಆಗದಂತೆ ಕ್ರಮ ನಾನು ಬಂದ ಕೂಡಲೇ ಕಚೇರಿಯ ಟ್ಯಾಂಕ್‌ಗಳಿಗೆ ನೀರು ತುಂಬಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದೇವೆ ಲೋಕೇಶ್ ಪ್ರಭಾರ ಗ್ರೇಡ್‌ 2 ತಹಶೀಲ್ದಾರ್ ಹೊಳೆನರಸೀಪುರ ಮೇಲಧಿಕಾರಿಗಳಿಗೆ ಮಾಹಿತಿ ನಮ್ಮ ಸರ್ವೇಯರ್‌ಗಳು ಕುಳಿತುಕೊಳ್ಳಲು ಅಗತ್ಯಕ್ಕೆ ತಕ್ಕಷ್ಟು ಸ್ಥಳಾವಕಾಶ ಹಾಗೂ ಪೀಠೋಕರಣಗಳ ಅವಶ್ಯಕತೆ ಇದೆ ಎಂಬುದನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ.
ಪರಶಿವನಾಯಕ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹೊಳೆನರಸೀಪುರ
ಒಂದೇ ಶೌಚಾಲಯ ನಮಗಿರುವ ಸ್ಥಳಾವಕಾಶದಲ್ಲಿ ಒಂದು ಶೌಚಾಲಯದ ವ್ಯವಸ್ಥೆ ಕಲ್ಪಿಸಿದ್ದೇವೆ. ಅಗತ್ಯ ಇದ್ದಾಗ ತಾಲ್ಲೂಕು ಕಚೇರಿಯ ಶೌಚಾಲಯ ಬಳಸುತ್ತಾರೆ. ದಿವಾಕರ್ ನೋಂದಣಾಧಿಕಾರಿ ಬಳಕೆಗೆ ಅವಕಾಶ ಬೇಕು ಮಿನಿ ವಿಧಾನಸೌಧ ಕಾಂಪೌಂಡ್‍ಗೆ ಅಂಟಿಕೊಂಡಂತೆ ಸಾರ್ವಜನಿಕ ಶೌಚಾಲಯವಿದೆ. ಹಣ ಪಾವತಿಸಿ ಬಳಸಲು ಅವಕಾಶವಿದೆ. ವಿಧಾನಸೌಧ ಕಾಂಪೌಂಡ್ ಕಡೆಯಿಂದಲೂ ಗೇಟ್ ಅಳವಡಿಸಿದರೆ ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಬಳಸಲು ಅವಕಾಶವಾಗುತ್ತದೆ. ನಾರಾಯಣ ಆಲೂರು ನಾಗರಿಕ ಕಾಲಮಿತಿಯಲ್ಲಿ ಕಡತ ವಿಲೇವಾರಿ ತಾಲ್ಲೂಕು ಕಚೇರಿಯಲ್ಲಿ ಇ-ಕಚೇರಿ ಆರಂಭಿಸಲಾಗಿದ್ದು ಕಡತಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಎಲ್ಲಾ ಕೇಸ್ ವರ್ಕರ್‌ಗಳಿಗೆ ಕಂಪ್ಯೂಟರ್ ನೀಡಲಾಗಿದೆ.
ಬಿ.ಎಂ. ಗೋವಿಂದರಾಜು ಚನ್ನರಾಯಪಟ್ಟಣ ತಹಶೀಲ್ದಾರ್
ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ತಾಲ್ಲೂಕು ಕಚೇರಿಯಲ್ಲಿ ರ‍್ಯಾಂಪ್‌ ಹಾಗೂ ಲಿಫ್ಟ್ ಸೌಲಭ್ಯ ಇದೆ. ಕುಡಿಯುವ ನೀರಿನ ಸೌಲಭ್ಯವಿದ್ದು ಅದನ್ನು ದುರಸ್ತಿ ಮಾಡಬೇಕಿದೆ. ಅಂಗವಿಕಲರಿಗೆ ದಾಖಲೆಗಳನ್ನು ಪಡೆಯಲು ಪ್ರತ್ಯೇಕ ಸರದಿ ವ್ಯವಸ್ಥೆ ಒದಗಿಸಬೇಕಿದೆ.
ಸಿ.ಜಿ. ಸೋಮಶೇಖರ್ ಚನ್ನರಾಯಪಟ್ಟಣ
ಶೌಚಾಲಯ ಇಲ್ಲದ ಮಿನಿ ವಿಧಾನಸೌಧ
ಆಲೂರು ತಾಲ್ಲೂಕಿನಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗಾಗಿ ರ‍್ಯಾಂಪ್‌ ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಪರವಾಗಿಲ್ಲ. ಆದರೆ ಮಿನಿ ವಿಧಾನಸೌಧದಲ್ಲಿ ಶೌಚಾಲಯವಿದ್ದರೂ ಬಳಕೆಗೆ ಬಾರದಾಗಿದೆ. ಪೈಪ್‌ಗಳು ಒಡೆದು ನೀರು ಸರಬರಾಜು ಇಲ್ಲದೇ ದುರ್ವಾಸನೆ ಬೀರುತ್ತಿರುವುದರಿಂದ ಶೌಚಾಲಯ ಮುಚ್ಚಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರ ಪಾಡು ಹೇಳತೀರದಾಗಿದೆ. ಸಮೀಪದ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿರುವ ಶೌಚಾಲಯ ಬಳಸುತ್ತಿದ್ದಾರೆ. ಅಲ್ಲಿಗೆ ಹೋಗಿ ಬರಲು ಕನಿಷ್ಠ 20 ನಿಮಿಷ ಸಮಯ ವ್ಯರ್ಥವಾಗುತ್ತಿದೆ. ಕಂದಾಯ ಪೊಲೀಸ್ ಶಿಕ್ಷಣ ಸೆಸ್ಕ್ ಇತರೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳನ್ನು ಒಂದು ವಾರದಲ್ಲಿ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದ ವಿಭಾಗ ಅಥವಾ ಕಚೇರಿಗೆ ಕಳುಹಿಸಲಾಗುತ್ತದೆ. ಕೆಲ ಸಂದರ್ಭದಲ್ಲಿ ಅರ್ಹ ದಾಖಲಾತಿಗಳು ಸಕಾಲಕ್ಕೆ ದೊರಕದೇ ವಿಳಂಬವಾಗಬಹುದು ಎನ್ನುತ್ತಾರೆ ಕಚೇರಿ ಸಿಬ್ಬಂದಿ. ದಾಖಲೆಗಾಗಿ ನಿತ್ಯ ಅಲೆದಾಟ ನಗರಸಭೆ ಕಾರ್ಯಾಲಯದಲ್ಲಿ ಜನರಿಗೆ ಸಮಯಕ್ಕೆ ಸರಿಯಾಗಿ ಅಗತ್ಯ ದಾಖಲೆ ಒದಗಿಸುವಲ್ಲಿ ಮತ್ತು ತೆರಿಗೆ ಪಾವತಿ ಮಾಹಿತಿ ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಸೌಲಭ್ಯ ಪಡೆಯಲು ನಿತ್ಯ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ನಾಗರಿಕ ಪರಮೇಶ್ವರಪ್ಪ ಆರೋಪಿಸಿದ್ದಾರೆ. ಮೂರು ತಿಂಗಳ ಹಿಂದೆ ಕಡತ ನೀಡಿದ್ದು ಇಲ್ಲಿನ ಸಿಬ್ಬಂದಿ ಕಡತ ಕಾಣುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಕೆಲಸವಾಗದಿದ್ದರೆ ಪದೇ ಪದೇ ಕಚೇರಿಗೆ ಅಲೆಯುವ ಪರಿಸ್ಥಿತಿ ಇದ್ದು ಈ ವಯಸ್ಸಿನಲ್ಲಿ ಕಚೇರಿ ಅಲೆಯುವ ಪರದಾಟ ನಮ್ಮದಾಗಿದೆ ಎಂದು ಬಹುತೇಕ ನಾಗರಿಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT