ಹಾಸನ: ಸಿ.ಡಿ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಸರ್ಕಾರ ಯಾವ ರೀತಿ ರಕ್ಷಣೆ ಮಾಡುತ್ತಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಕುರಿತು ಮುಖ್ಯಮಂತ್ರಿ ಹಾಗೂ ಗೃಹಸಚಿವರು ಪ್ರತ್ಯೇಕ ಹೇಳಿಕೆ ನೀಡುತ್ತಿದ್ದಾರೆ. ಆ ಎರಡು ಹೇಳಿಕೆಯಲ್ಲಿಯೇ ಯಾವ ರೀತಿ ಅವರನ್ನು ರಕ್ಷಿಸುತ್ತಿದ್ದಾರೆ ಎಂಬುದುಗೊತ್ತಾಗುತ್ತಿದೆ. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ. ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆನೀಡಿದರು.
18 ರಿಂದ 44 ವರ್ಷದವರಿಗೆ ಕೊರೊನಾ ಲಸಿಕೆ ಸಿಗುತ್ತಿಲ್ಲ. ಜನರ ಜೀವ ಉಳಿಸಿ ಎಂದು ಸರ್ಕಾರದ ಬಳಿ ಭಿಕ್ಷೆಬೇಡುತ್ತಿದ್ದೇವೆ. ಆದರೆ, ಕೆಲವು ಜನರಿಗೆ ಮಾತ್ರ ಲಸಿಕೆ ಸುಲಭವಾಗಿ ಸಿಗುತ್ತಿದೆ. ಒಬ್ಬ ಸಂಸದ₹ 900 ಕ್ಕೆ ಲಸಿಕೆಸಿಗುತ್ತದೆ ಎನ್ನುತ್ತಾರೆ. ಆದರೆ, ಬೇರೆಯವರಿಗೆ ಏಕೆ ಸಿಗುತ್ತಿಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ಹೆಸರು ಪ್ರಸ್ತಾಪಿಸದೆ ಆರೋಪಿಸಿದರು.
ಒಂದು ರಾಷ್ಟ್ರ ಒಂದು ಚುನಾವಣೆ, ಒಂದೇ ಶಿಕ್ಷಣ ಎನ್ನವು ಬದಲಿಗೆ ‘ಒನ್ ವ್ಯಾಕ್ಸಿನೇಷನ್, ಫ್ರೀ ವ್ಯಾಕ್ಸಿನೇಷನ್’ಘೋಷಣೆ ಹೊರಡಿಸಲಿ. ಕೊರೊನಾದಿಂದ ದೇಶದಲ್ಲಿ ಸಾಕಷ್ಟು ಸಾವು, ನೋವು ಸಂಭವಿಸುತ್ತಿವೆ. ಈಗ ಯಾವುದೇ ಅಭಿವೃದ್ಧಿ ಕೆಲಸಗಳು ಬೇಕಿಲ್ಲ. ಜನರ ಪ್ರಾಣ ರಕ್ಷಣೆಗೆ ಏನು ಬೇಕೋ ಅದನ್ನು ಮಾಡಿ ಎಂದು ತಿಳಿಸಿದರು.
ಕೋವಿಡ್ ಸಂಕಷ್ಟದಲ್ಲಿರುವವರಿಗೆ ರಾಜ್ಯ ಹಾಗೂ ಕೇಂದ್ರ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಅಸಹಾಯಕರಿಗೆನೆರವಾಗುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದ್ದೇನೆ. ರಾಜ್ಯದ ಉದ್ದಗಲಕ್ಕೂ ಪಕ್ಷದ ಕಾರ್ಯಕರ್ತರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ಸರ್ಕಾರ ಏನು ಮಾಡುತ್ತಿದೆ ಎಂಬುದರ ಕುರಿತು ಯೋಚಿಸುತ್ತ ಕೂರಲು ಆಗುವುದಿಲ್ಲ. ನಾವು ಔಷಧಕ್ಕಾಗಿಭಿಕ್ಷೆ ಬೇಡುತ್ತಿದ್ದರೆ, ಅವರು ಅಧಿಕಾರಕ್ಕಾಗಿ ಆ ಕೆಲಸ ಮಾಡುತ್ತಿದ್ದಾರೆ. ಅವರಿಗೂ ನಮಗೂ ಇರುವ ವ್ಯತ್ಯಾಸ ಇದೆ ಎಂದು ರಾಜ್ಯ ಸರ್ಕಾರದ ಕಾಲೆಳೆದರು ಎಂದು ಹೇಳಿದರು.
ಕೊರೊನಾ ಸೋಂಕಿನಿಂದ ನಿತ್ಯ ಹತ್ತು ಸಾವಿರ ಜನರು ಸಾಯುತ್ತಿದ್ದರೂ ಐದು ಸಾವಿರ ಎಂದು ತಪ್ಪು ಲೆಕ್ಕ ಕೊಡುತ್ತಿದ್ದಾರೆ. ಡೆತ್ ಆಡಿಟ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಕೋವಿಡ್ ಪರೀಕ್ಷೆ ಕಡಿಮೆ ಮಾಡವಂತೆ ಹೇಳುತ್ತಿರುವುದುಯಾಕೆ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಮುಖಂಡರಾದ ಬನವಾಸೆ ರಂಗಸ್ವಾಮಿ, ದೇವರಾಜೇಗೌಡ, ಬಸವರಾಜು, ಬಾಲಕೃಷ್ಣ, ರಾಷ್ಟ್ರೀಯ ಮಾನವಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಸಯ್ಯದ್ ಏಜಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.