ಹಾಸನ: ಅಧಿದೇವತೆ ಹಾಸನಾಂಬೆ ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ₹89,67,331 ಸಂಗ್ರಹವಾಗಿದೆ.
ಟಿಕೆಟ್, ಸೀರೆ, ಲಾಡು ಪ್ರಸಾದ ಮಾರಾಟದಿಂದ ₹1,58,61,440 ಕೋಟಿ ಸೇರಿ ಒಟ್ಟು ₹ 2,48,28771 ಸಂಗ್ರಹವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದರ್ಶನದ ಅವಧಿ ಕಡಿಮೆ ಇದ್ದಿದ್ದು ಆದಾಯ ಇಳಿಕೆಯಾಗಲೂ ಕಾರಣ ಎಂದು ಹೇಳಲಾಗಿದೆ.
ನ.1 ರಿಂದ ಜಾತ್ರಾ ಆರಂಭಗೊಂಡು 9 ರಂದು ಜಾತ್ರಾ ಮಹೋತ್ಸವ ಮುಕ್ತಾಯಗೊಂಡಿತು. ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ 16 ಹುಂಡಿಗಳ ಎಣಿಕೆ ಕಾರ್ಯ ನಾಲ್ಕು ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಆರಂಭಗೊಂಡು, ಸಂಜೆ 8.30ಕ್ಕೆ ಅಂತ್ಯಗೊಂಡಿತು.
ಕೆನರಾ ಬ್ಯಾಂಕ್ , ಕಂದಾಯ ಇಲಾಖೆ ಸಿಬ್ಬಂದಿ, ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು, ತಹಶೀಲ್ದಾರ್ ಶಿವಶಂಕರಪ್ಪ, ಮುಜರಾಯಿ ತಹಶೀಲ್ದಾರ್ ವಿದ್ಯುನ್ ಲತಾ, ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಸೇರಿದಂತೆ 60 ಮಂದಿ ಎಣಿಕೆ ಕಾರ್ಯದಲ್ಲಿ ತೊಡಗಿದರು.
ಹುಂಡಿ ಎಣಿಕೆ ವೇಳೆ ಪ್ರೇಮ ಪತ್ರ ಸೇರಿದಂತೆ ಕೌಟುಂಬಿಕ ಸಮಸ್ಯೆ ನಿವಾರಿಸು, ಅನಾರೋಗ್ಯ ಗುಣಪಡಿಸು ಎಂಬಿತ್ಯಾದಿ ನಿವೇದನೆ, ಪ್ರಾರ್ಥನೆಯ ಪತ್ರಗಳ ಜೊತೆಗೆ ನಿಷೇಧವಾಗಿರುವ 1,000 ಮತ್ತು 500 ಮುಖಬೆಲೆ ನೋಟು ಸಹ ಸಿಕ್ಕಿವೆ.
ಭಕ್ತೆಯೊಬ್ಬರು ಬರೆದ ಪತ್ರ ಈ ರೀತಿ ಇದೆ. ‘ನನ್ನ ಮಗ 1993ರಲ್ಲಿ ಜನಿಸಿದ. ಆತ ಬದುಕಿದ್ದರೆ ಇಂದಿಗೆ 22 ವರ್ಷ ಆಗುತ್ತಿತ್ತು. 2016ರಲ್ಲಿ ಗಂಗಾದೇವಿ ಪಾದ ಸೇರಿದ. ಮೂರು ಮಂದಿ ಮಕ್ಕಳಲ್ಲಿ ಆತನ ಸಾವು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ತಂದೆ, ತಾಯಿ ಬದುಕಿರುವಾಗಲೇ ಪುತ್ರ ಶೋಕ ನೀಡುವುದು ಯಾವ ನ್ಯಾಯ. ಯಾವ ರೂಪದಲ್ಲಾದರೂ ನನ್ನ ಮಗ ಬೇಕು’ ಎಂದು ತಾಯಿಗೆ ಮೊರೆ ಇಟ್ಟಿದ್ದಾಳೆ.
ಮತ್ತೊಬ್ಬ ಭಕ್ತ, ತನ್ನ ದೇಹದ ಚರ್ಮ ಕಾಯಿಲೆ ವಾಸಿ ಮಾಡಿ, ಸ್ವಯಂ ಉದ್ಯೋಗ ಮಾಡುವ ಶಕ್ತಿ ಕೊಡುವಂತೆ ಮನವಿ ಮಾಡಿದ್ದಾರೆ.
2017ರಲ್ಲಿ ದೇವಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ಒಟ್ಟು ₹ ₹4,14,64,967 ಆದಾಯ ಬಂದಿತ್ತು. ಹಾಸನಾಂಬ ಹುಂಡಿಯಿಂದ ₹ 1,10,91,383, ಸಿದ್ದೇಶ್ವರ ದೇವಾಲಯ ಹುಂಡಿಯಿಂದ ₹ 7,68,090 ಹಾಗೂ ಟಿಕೆಟ್, ಲಾಡು ಪ್ರಸಾದ ಮಾರಾಟದಿಂದ ₹ 2,96,04,494 ಕೋಟಿ ಸಂಗ್ರಹವಾಗಿತ್ತು.