‘ರೈತನ ಮಗನಾಗಿ ಹುಟ್ಟಿ ರೈತನ ಮಗನಾಗಿಯೇ ಸಾಯುತ್ತೇನೆ. ನನಗೆ ಪದ್ಮಭೂಷಣ, ಪದ್ಮ ವಿಭೂಷಣ, ಭಾರತ ರತ್ನ ಯಾವುದೇ ಪ್ರಶಸ್ತಿ ಬೇಕಿಲ್ಲ. ರಾಜಕೀಯದಲ್ಲಿ ಜನತಾ ಜನಾರ್ಧನನ ಆಶೀರ್ವಾದ ಇದ್ದರಷ್ಟೇ ಎತ್ತರಕ್ಕೆ ಬೆಳೆಯಲು ಸಾಧ್ಯ. ಇಷ್ಟು ವರ್ಷದ ಜೀವನದಲ್ಲಿ ಸಿಹಿ-ಕಹಿ ಎರಡನ್ನೂ ನೋಡಿದ್ದೇನೆ. ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ರೈತರು, ಗ್ರಾಮೀಣ ಜನರ ಪರವಾಗಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು.
ಸನ್ನಿವೇಶ ನೋಡಿ ತೀರ್ಮಾನ:ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬ ಬಗ್ಗೆ ಸನ್ನಿವೇಶ ನೋಡಿಕೊಂಡು ಎಚ್.ಡಿ. ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ. ಬೆಂಬಲ ನೀಡುವ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದು ನಿಜ. ಸಿ.ಎಂ ಬೊಮ್ಮಾಯಿ ಅವರು ಕುಮಾರಸ್ವಾಮಿ ಜೊತೆ ಮಾತಾಡಿದ್ದಾರೆ. ಸ್ಥಳೀಯವಾಗಿ ಗೆದ್ದಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಮಾಡಬೇಕು. ಅದನ್ನು ಬಿಟ್ಟು ನಾವೇ ತೀರ್ಮಾನ ಮಾಡುವುದು ಸರಿಯಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.