ಹಾಸನ: ‘ಹಿಂದೂ ಸಮುದಾಯ ಸಂಘಟಿತವಾದರೆ ದೇಶ ತನ್ನೆಲ್ಲಾ ಸಮಸ್ಯೆಗಳಿಂದ ಹೊರಬರುತ್ತದೆ’ ಎಂದು ಕರ್ನಾಟಕ ದಕ್ಷಿಣ ಪ್ರಾಂತ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಹಾಸನಾಂಬಾ ಕಲಾಕ್ಷೇತ್ರದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಮೈಸೂರು ವಿಭಾಗದ ಪ್ರಾಥಮಿಕ ಶಿಕ್ಷಾ ವರ್ಗ-2021ರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಿಂದೂ ಸಮಾಜದಲ್ಲಿ ಸಂಘಟನೆ, ಶಿಸ್ತು ಹಾಗೂ ಯೋಜನೆ ಕೊರತೆ ಇರುವುದರಿಂದ ದೇಶದಲ್ಲೇ ಬಹುಸಂಖ್ಯಾತರಾದರೂ ಹಿಂದೂ ಧರ್ಮ ದುರ್ಬಲವಾಗಿದೆ’ ಎಂದರು.
‘ಜಾತಿ ಪದ್ಧತಿ, ಭಾಷೆಯ ವಿಷಮತೆ, ಉತ್ತರ ದಕ್ಷಿಣ ಎಂಬ ಲೋಪಗಳು, ಆರ್ಯ ದ್ರಾವಿಡ ಎಂಬ ವಿಚಾರದ ಚರ್ಚೆಗಳು ಹಿಂದೂ ಧರ್ಮವನ್ನು ಛಿದ್ರ ಮಾಡಿದೆ. ಈ ಎಲ್ಲಾ ಸಮಸ್ಯೆಗಳಿಂದ ಹೊರಬಂದಾಗ ಮಾತ್ರ ಅತ್ಯಂತ ಶಕ್ತಿಶಾಲಿ ಸಮಾಜವಾಗಲು ಸಾಧ್ಯ’ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮೊದಲು ಹಾಸನಾಂಬಾ ದೇವಸ್ಥಾನ ಬಳಿಯಿಂದ ಗಣವೇಷಧಾರಿಗಳು ಮೆರವಣಿಗೆ ಹೊರಟು ಹೊಸಲೈನ್ ರಸ್ತೆ, ಗಾಂಧಿ ಬಜಾರ್, ಸುಭಾಷ್ ವೃತ್ತ, ಎನ್.ಆರ್ ವೃತ್ತ. ಮಹಾವೀರ ವೃತ್ತ, ಅಗ್ರಹಾರ ರಸ್ತೆ, ಅರಳಪೇಟೆ ರಸ್ತೆ, ಸಹ್ಯಾದ್ರಿ ರಸ್ತೆ ಮೂಲಕ ಆಕರ್ಷಕ ಪಥ ಸಂಚಲನ ನಡೆಸಿದರು.
ಕಾರ್ಯಕ್ರಮದಲ್ಲಿ ಸಂಘದ ಶಿಬಿರಾಧಿಕಾರಿ ಲಕ್ಷ್ಮೀಕಾಂತ್, ಹಿರಿಯ ಪ್ರಚಾರಕ ದಾ.ಮ. ರವೀಂದ್ರ, ಪ್ರಾಂತ ಕಾರ್ಯಕಾರಣಿ ಸದಸ್ಯ ಲಕ್ಷ್ಮೀನಾರಾಯಣ ಶಾಸ್ತ್ರಿ, ಮೈಸೂರು ವಿಭಾಗದ ಕಾರ್ಯವಾಹ ನಾರ್ವೇ ವಿಜಯಕುಮಾರ್, ಸಹ ಕಾರ್ಯವಾಹ ಮಹೇಶ್, ಪ್ರಚಾರಕ ಅಕ್ಷಯ್, ಮೋಹನ್ ಹಾಗೂ ಇತರರು ಇದ್ದರು.