ಹಾಸನ: ತಾಲ್ಲೂಕಿನ ನಿಟ್ಟೂರು ಸಮೀಪದ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಬಕಾರಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ನಾಗರಾಜ್ ಮತ್ತು ದಾವಣಗೆರೆಯ ಶೇಖರಪ್ಪ ಬಂಧಿತ ಆರೋಪಿಗಳು. ಜಮೀನು ಗುತ್ತಿಗೆ ಪಡೆದಿದ್ದ ಪ್ರಕಾಶ್ ಎಂಬಾತ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.
ಅಬಕಾರಿ ಉಪ ಆಯುಕ್ತ ಗೋಪಾಲಕೃಷ್ಣಗೌಡ ನಿರ್ದೇಶನದ ಮೇರೆಗೆ ನಾಗೇನಹಳ್ಳಿ ಪ್ರಕಾಶ್ ಎಂಬುವರಿಗೆ ಸೇರಿದ ನಾಲ್ಕು ಎಕರೆಯಲ್ಲಿ ಕಬ್ಬಿನ ಮಧ್ಯೆ ಗಾಂಜಾ ಬೆಳೆದಿರುವುದನ್ನು ಅಬಕಾರಿ ಸಿಬ್ಬಂದಿ ಪತ್ತೆ ಮಾಡಿ, ಸುಮಾರು 60 ಕೆ.ಜಿ ಯಷ್ಟು ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.
‘ಸುಮಾರು 50 ಕೆ.ಜಿ. ಗಾಂಜಾ ಸೊಪ್ಪ ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆ ಮಾಡಲಾಗುವುದು’ ಎಂದು ಅಬಕಾರಿ ಉಪ ಆಯುಕ್ತ ಗೋಪಾಲಗೌಡ ತಿಳಿಸಿದರು.