ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಾಂತ್ ಹತ್ಯೆ ಕುರಿತು ತನಿಖೆ ನಂತರ ಸತ್ಯ ಬಹಿರಂಗ: ಸಚಿವ ಗೋಪಾಲಯ್ಯ

Last Updated 3 ಜೂನ್ 2022, 9:13 IST
ಅಕ್ಷರ ಗಾತ್ರ

ಹಾಸನ: ನಗರದಲ್ಲಿ ಎರಡು ದಿನದ ಹಿಂದೆ ನಡೆದ ನಗರಸಭೆಯ ಸದಸ್ಯ, ಜೆಡಿಎಸ್ ಮುಖಂಡ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆಗೆ ಸೂಚಿಸಲಾಗಿದೆ. ತನಿಖೆಯ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆ ಸದಸ್ಯ ಪ್ರಶಾಂತ್ ಅವರ ಕೊಲೆಯೂ ಎರಡು ಕುಟುಂಬಗಳ ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಗೃಹ ಸಚಿವರೂ ಸೂಚನೆ ನೀಡಿದ್ದಾರೆ ಎಂದರು.

ಪ್ರಶಾಂತ್ ಅವರ ಸಾವಿನಿಂದ ಸಮಾಜಕ್ಕೆ ಬಹಳ ನಷ್ಟವಾಗಿದೆ‌. ಈ ಹತ್ಯೆಯನ್ನು ಖಂಡಿಸುವುದಾಗಿ ಹೇಳಿದ ಗೋಪಾಲಯ್ಯ, ಸಾವಿನಲ್ಲಿ‌ ರಾಜಕೀಯ ಮಾಡುವುದು ಸರಿಯಲ್ಲ. ಶಾಸಕ ಎಚ್.ಡಿ. ರೇವಣ್ಣ ಅವರ ಆರೋಪಗಳು ಕಪೋಲಕಲ್ಪಿತ ಎಂದರು.

ಪ್ರಕರಣ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಯಾರೇ ತಪ್ಪಿತಸ್ಥರಿದ್ದರೂ ಕಠಿಣ ಶಿಕ್ಷೆ ಆಗಲಿದೆ ಎಂದು ಭರವಸೆ ನೀಡಿದರು.

ನಗರದಲ್ಲಿ ಪೊಲೀಸ್ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕಾರಣ ಈ ರೀತಿಯ ಘಟನೆ ನಡೆದಿದೆ ಎಂದು ಜೆಡಿಎಸ್ ಪಕ್ಷದ ನಾಯಕರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಗೋಪಾಲಯ್ಯ, ವಿರೋಧಪಕ್ಷದವರು ಇಂತಹ ಹೇಳಿಕೆ ನೀಡುವುದು ಸಹಜ. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಸತ್ಯಾಸತ್ಯತೆ ಹೊರಬೀಳಲಿದ್ದು ನಂತರವಷ್ಟೆ ಸೂಕ್ತ ಉತ್ತರ ನೀಡುವುದಾಗಿ ಸಚಿವರು ತಿಳಿಸಿದರು.

ಯಾವುದೇ ಆಮಿಷ ನೀಡಿಲ್ಲ: ಪ್ರೀತಂಗೌಡ

ಶಾಸಕ ಪ್ರೀತಂಗೌಡ ಮಾತನಾಡಿ, ರಾಜಕೀಯ ನಿಂತ ನೀರಲ್ಲ. ಯಾರು ಬೇಕಾದರೂ ಯಾವುದೇ ಪಕ್ಷಕ್ಕೆ ಹೋಗಬಹುದು. ನಾನೂ ಪಕ್ಷ ಸಂಘಟ‌ನೆ ಮಾಡುತ್ತೇನೆ. 18 ವರ್ಷದ ಮೇಲಿನವರಿಗೆ ಪಕ್ಷಕ್ಕೆ ಬರುವಂತೆ ಮನವಿ ಮಾಡುತ್ತೇನೆ. ಪಕ್ಷದ ತತ್ವ, ಸಿದ್ಧಾಂತ ಒಪ್ಪುವವರು ಪಕ್ಷಕ್ಕೆ ಬರುತ್ತಾರೆ. ಇದರಲ್ಲಿ ಆಮಿಷದ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ ಎಂದು ಪ್ರಶ್ನಿಸಿದರು.

ಪ್ರಶಾಂತ್ ಅವರಿಗೆ ಬಿಜೆಪಿ ಸೇರುವಂತೆ ಒತ್ತಡ ಹೇರಲಾಗುತ್ತಿತ್ತು. ಹಣದ ಆಮಿಷ ಒಡ್ಡಲಾಗಿತ್ತು‌ ಎಂಬ ಜೆಡಿಎಸ್ ಮುಖಂಡರ ಆರೋಪಗಳಿಗೆ ಪ್ರೀತಂಗೌಡ ಪ್ರತಿಕ್ರಿಯೆ ನೀಡಿದರು.

ನಾನು ಎಂದಿಗೂ ಸಹ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಅವರ ಹತ್ಯೆ ದುರದೃಷ್ಟಕರ ಹಾಗೂ ದುಃಖದ ಸಂಗತಿಯೆಂದು ಶಾಸಕ ಪ್ರೀತಂ ಗೌಡ ತಿಳಿಸಿದರು.

ಪ್ರಶಾಂತ್ ಅವರು ನನ್ನೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಇತ್ತೀಚೆಗೆ ಅವರ ವಾರ್ಡ್ ನಲ್ಲಿ ಹಕ್ಕುಪತ್ರ ವಿತರಣೆ ಸಂದರ್ಭದಲ್ಲಿ ನಮ್ಮೊಂದಿಗೆ ಓಡಾಡಿದ್ದರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗುವುದಾಗಿ ತಿಳಿಸಿದ ಪ್ರೀತಂ ಗೌಡ, ಪ್ರಕರಣ ಸಂಬಂಧ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಗೃಹ ಮಂತ್ರಿ, ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದರು.

ಹಾಸನ ನಗರದಲ್ಲಿ ವಿರೋಧಪಕ್ಷದ ಹಾವಳಿ ಹೆಚ್ಚಾಗಿದೆ. ಅವರು ಸಮಾಧಾನವಾಗಿ ಇದ್ದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವುದಿಲ್ಲ. ನಗರದಲ್ಲಿ ಪೊಲೀಸ್ ಅಧಿಕಾರಿಗಳ ಕಾನೂನು ಪಾಲನೆ ಸರಿಯಾಗಿದೆ. ಪ್ರಶಾಂತ್ ಅವರ ಅಂತ್ಯಕ್ರಿಯೆ ನಡೆಯುವವರೆಗೂ ಎಸ್ಪಿ ಶ್ರೀನಿವಾಸ ಗೌಡ ಹಾಗೂ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ವಿರೋಧ ಪಕ್ಷದವರೇ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿ, ನಗರದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸುತ್ತಾರೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT