ಆಲೂರು: ಸುತ್ತಲಿನ 48 ಹಳ್ಳಿಗಳಿಗೆ ಸೇರಿದ ಕೆಂಚಾಂಬ ದೇವಿ ವರ್ಷದ ದೊಡ್ಡ ಜಾತ್ರೆ ಕಟ್ಟುನಿಟ್ಟಿನಿಂದ ಅತ್ಯಂತ ವೈಭವ, ಭಯ, ಭಕ್ತಿಯಿಂದ ಮೇ 12 ರಿಂದ 19 ರವರೆಗೆ ಹರಿಹಳ್ಳಿ ಗ್ರಾಮದಲ್ಲಿರುವ ಕೆಂಚಾಂಬಿಕೆ ದೇವಸ್ಥಾನದಲ್ಲಿ ನಡೆಯುತ್ತದೆ.
ಜಾತ್ರೆ ಪ್ರಾರಂಭವಾಗುವ ಒಂದು ವಾರ ಮೊದಲು ಭಾನುವಾರ 48 ಹಳ್ಳಿಗಳಲ್ಲೂ ಸುಗ್ಗಿ ಸಾರು ಹಾಕಲಾಗುತ್ತದೆ. ಸಾರು ಹಾಕಿದ ನಂತರ 48 ಹಳ್ಳಿಗಳ ವ್ಯಾಪ್ತಿಯಲ್ಲಿ ಬುಧವಾರದವರೆಗೆ ಹಸಿ ಕೊನೆ ಕಡಿಯುವಂತಿಲ್ಲ, ಮುರಿಯುವಂತಿಲ್ಲ. ಒಗ್ಗರಣೆ ಹಾಕುವಂತಿಲ್ಲ. ರೊಟ್ಟಿ ಮಾಡುವುದು ನಿಷೇಧ.
ಸಾರು ಹಾಕುವ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಹೊರ ಊರಿನಲ್ಲಿದ್ದಾಗ ಆಕಸ್ಮಿಕವಾಗಿ ಋತುಚಕ್ರಕ್ಕೆ ಒಳಗಾದರೆ ಊರಿನೊಳಗೆ ಪ್ರವೇಶಿಸುವಂತಿಲ್ಲ. ಸೂತಕಕ್ಕೆ ಸಿಕ್ಕಿದವರು ಹೊರ ಊರಿಗೆ ತೆರಳುತ್ತಾರೆ. ಈ ಕಟ್ಟುಪಾಡು ಇಂದಿಗೂ ನಡೆದು ಬರುತ್ತಿದೆ. ದೇವಿಗೆ ಪ್ರಾಣಿ ಬಲಿ ಇಲ್ಲ. ಕೆಂಪು ಅನ್ನ ಬಲಿ ಅರ್ಪಿಸಲಾಗುತ್ತದೆ.
ಬುಧವಾರದಿಂದ ಪ್ರತಿ 48 ಹಳ್ಳಿಗಳಲ್ಲಿ ಕೆಂಚಮ್ಮನವರ ಮುಖ ಧರಿಸಿ, ಕೂರಿಸಿ ಜಾತ್ರೆ ಪ್ರಾರಂಭ ಮಾಡಲಾಗುತ್ತದೆ. ಶನಿವಾರ ಎಲ್ಲ ಹಳ್ಳಿಗಳಲ್ಲೂ ದೊಡ್ಡ ಸುಗ್ಗಿ ನಡೆಯುತ್ತದೆ. ಬೆಳಗಿನ ಜಾವ ಪ್ರತಿ ಹಳ್ಳಿಗಳಲ್ಲಿ ಮಹಿಳೆಯರು ಕಳಸ ತೆಗೆದುಕೊಂಡು ಹೊಳೆ ಬಳಿ ತೆರಳಿ ಕೆಂಚಾಂಬಿಕೆ ದೇವಿಗೆ ಪೂಜೆ ಸಲ್ಲಿಸುತ್ತಾರೆ.
ಶನಿವಾರ ರಾತ್ರಿ ಹರಿಹಳ್ಳಿ ಗ್ರಾಮದ ಮೂಲ ದೇವಸ್ಥಾನದಲ್ಲಿ ಸಪ್ತಮಾತೃಕೆಯರ ಮುಖವಾಡವನ್ನಿಟ್ಟು ರಾತ್ರಿ 8.10 ರವರೆಗೆ ಅಲಂಕಾರ ಮಾಡಿ ಸುಗ್ಗಿ ನಡೆಯುತ್ತದೆ. ಎಲ್ಲರಿಗೂ ದಾಸೋಹ ಏರ್ಪಡಿಸಲಾಗಿದೆ.
ಶನಿವಾರ ರಾತ್ರಿಯಿಂದ ಏಳು ದಿನಗಳ ಕಾಲ ನಿತ್ಯ ಎಲ್ಲ ಗ್ರಾಮಗಳಲ್ಲಿ ಸುಗ್ಗಿ ನಡೆಯುತ್ತದೆ. ಸೋಮವಾರ ಮುಕ್ತಾಯವಾಗುತ್ತದೆ. ಜಾತ್ರೆ ದಿನ ಪ್ರತಿಯೊಬ್ಬರೂ ದೇವಿ ಪಾದ ಮುಟ್ಟಿ ನಮಸ್ಕರಿಸಲು ಅವಕಾಶ ನೀಡಲಾಗುತ್ತದೆ. ಜಾತ್ರೆಯಲ್ಲಿ ಮಣ್ಣಿನ ಮಡಿಕೆ ವ್ಯಾಪಾರ ಬಲು ಜೋರು. ಜಾತ್ರೆಗೆ ಬಂದ ಪ್ರತಿಯೊಬ್ಬರೂ ಮಡಿಕೆ ಕೊಂಡು ಹೋಗುವುದು ವಾಡಿಕೆಯಾಗಿದೆ.
48 ಹಳ್ಳಿಗಳಲ್ಲಿ ಏಕಕಾಲದಲ್ಲಿ ಸುಗ್ಗಿ ನಡೆಯುವುದು ಅತ್ಯಂತ ವಿಶೇಷ. ಕೆಂಚಾಂಬ ದೇವಿ ಅತ್ಯಂತ ಬಲಶಾಲಿ. ಸಂತಾನ ಪ್ರಾಪ್ತಿಗೆಂದು ಹರಕೆ ಹೊರುವುದು ದೇವಿ ಪಾದ ಮುಟ್ಟಿ ಎಲ್ಲರೂ ನಮಸ್ಕರಿಸುವುದು ಜಾತ್ರೆ ವಿಶೇಷ.ಎಚ್.ಡಿ. ರಘು ಕೆಂಚಾಂಬಿಕೆ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.