ಹಾಸನ: ‘ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ (ಎಚ್ಆರ್ಪಿ) ಹೆಸರಿನಲ್ಲಿ ಸರ್ಕಾರಿ ಭೂಮಿ ಕಬಳಿಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕ ಹಾಗೂ ಅಧಿಕಾರಿಗಳ ವಿರುದ್ಧ ನಿವೃತ್ತ ತಹಶೀಲ್ದಾರ್ ಅಣ್ಣೇಗೌಡ ಮಾಡಿರುವ ಆರೋಪ ಸುಳ್ಳು. ಎಚ್ಆರ್ಪಿಯಿಂದ ಭೂಮಿ ಕಬಳಿಸಿರುವ ಅಣ್ಣೇಗೌಡರಬಗ್ಗೆಯೇ ತನಿಖೆಯಾಗಲಿ’ ಎಂದು ದಲಿತ ವಿಮೋಚನಾ ಹಾಗೂ ಮಾನವ ಹಕ್ಕು ವೇದಿಕೆ ಸಂಚಾಲಕ ಆರ್.ಮರಿಜೋಸೆಫ್ ಒತ್ತಾಯಿಸಿದರು.
‘ಮಧ್ಯವರ್ತಿಗಳೇ ಎಚ್ಆರ್ಪಿ ಭೂ ಹಗರಣಕ್ಕೆ ಮೂಲ ಕಾರಣ. ಸರ್ಕಾರ 414 ಪ್ರಕರಣಗಳಲ್ಲಿ ಭೂ ಮಂಜೂರಾತಿ ರದ್ದುಗೊಳಿಸಿದೆ. ಅಕ್ರಮ ಬೆಳಕಿಗೆ ಬಂದ ಬಳಿಕ ಮಧ್ಯವರ್ತಿಗಳು ನಾಪತ್ತೆಯಾಗಿದ್ದಾರೆ. ನಿವೃತ್ತ ತಹಶೀಲ್ದಾರ್ ಅಣ್ಣೇಗೌಡ ಅವರೇ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ’ ಎಂದುಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಮಾಜಿ ಸೈನಿಕನಿಗೆ ಭೂಮಿ ಮಂಜೂರು ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಮಾಜಿ ಸೈನಿಕ ಸರ್ಕಾರಿ ಹುದ್ದೆಯಲ್ಲಿದ್ದು, ಕಾನೂನು ಪ್ರಕಾರ ಎರಡು ಅಥವಾ ನಾಲ್ಕು ಎಕರೆ ಭೂಮಿ ಮಂಜೂರುಮಾಡಿಸಿಕೊಂಡರೆ ಹೇಗೆ ಕಾನೂನು ಬಾಹಿರವಾಗುತ್ತದೆ’ ಎಂದು ಪ್ರಶ್ನಿಸಿದರು.
‘ಚುನಾಯಿತ ಜನಪ್ರತಿನಿಧಿಗಳು ಗಡಿಯಲ್ಲಿ ದೇಶ ಕಾಯಲಿಲ್ಲ. ಅವರ ಮಕ್ಕಳನ್ನೂ ಸೇನೆಗೆ ಕಳಿಸಲಿಲ್ಲ. ಆದರೂ ಬೇನಾಮಿ ಹೆಸರಿನಲ್ಲಿ ಕೆಲ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ನೂರಾರು ಎಕರೆಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ. ಜಿಲ್ಲೆಯ ಇಬ್ಬರು ಪ್ರತ್ರಕರ್ತರೂಎಚ್ಆರ್ಪಿಯಲ್ಲಿ ಅಕ್ರಮವಾಗಿ ಭೂ ಮಂಜೂರಾತಿ ಮಾಡಿಸಿಕೊಂಡಿದ್ದಾರೆ.ಅಂತಹವರ ವಿರುದ್ಧ ಅಣ್ಣೇಗೌಡ ಏಕೆ ಚಕಾರಎತ್ತುವುದಿಲ್ಲ?’ ಎಂದರು.
‘ಅಣ್ಣೇಗೌಡ ಅವರು ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡಿ, ನಿಜವಾದ ಸಂತ್ರಸ್ತರಿಗೆ ಭೂಮಿ ಸಿಗದಂತೆ ಮಾಡಿ, ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದು ಆರೋಪಿಸಿದರು.
‘ಹೇಮಾವತಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರ ಪಟ್ಟಿಯಲ್ಲಿ ಹಾಸನ ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್ ಕುಟುಂಬ ಸಹ ಇದೆ. ಅವರ ಕುಟುಂಬಕ್ಕೆ ಜಿಲ್ಲಾಡಳಿತ ಭೂಮಿ ಮಂಜೂರು ಮಾಡಲು 40 ವರ್ಷ ಬೇಕಾಯಿತು. ಭೂಮಿ ಮಂಜೂರಾತಿಯಲ್ಲಿ ಲೋಪವಾಗಿಲ್ಲ’ ಎಂದರು.
ಗೋಷ್ಠಿಯಲ್ಲಿ ಆರ್.ಪಿ.ಐ ಜಿಲ್ಲಾಧ್ಯಕ್ಷ ಸತೀಶ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆತ್ತೂರು ನಾಗರಾಜ್ ಇದ್ದರು.