ಹಾಸನ: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ಸೇರಿದಂತೆ ಕೆಲ ನಿಯಮ ಪಾಲನೆ ಮಾಡದ ಕಾರಣ ತಾಲ್ಲೂಕಿನ ಶಾಂತಿ ಗ್ರಾಮದ ಹಾಸನಾಂಬ ಕ್ಲಿನಿಕ್ ಬಂದ್ ಮಾಡಿಸಲಾಗಿದೆ.
ತಹಶೀಲ್ದಾರ್ ಶಿವಶಂಕರಪ್ಪ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಡಾ ವಿಜಯ್ ನೇತೃತ್ವದಲ್ಲಿ ಗುರುವಾರ ಶಾಂತಿಗ್ರಾಮದ ಹಾಸನಾಂಬ ಕ್ಲಿನಿಕ್ಗೆ ದಿಢೀರ್ ಭೇಟಿ ನೀಡಿ ಪರೀಶೀಲಿಸಲಾಯಿತು.
ಅಂತರ ಕಾಯ್ದುಕೊಳ್ಳದೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೇ ತೀವ್ರ ಉಸಿರಾಟ ಸಮಸ್ಯೆ (ಸಾರಿ), ಶೀತ ಜ್ವರ ಮಾದರಿ ಅನಾರೋಗ್ಯ (ಐಎಲ್ಐ) ಪ್ರಕರಣಗಳಲ್ಲಿ ಗಂಟಲು ಮಾದರಿ ಪರೀಕ್ಷೆ ನಡೆಸದೆ ಚಿಕಿತ್ಸೆ ನೀಡುತ್ತಿರುವುದು ಪತ್ತೆಯಾಯಿತು.
ವೈದ್ಯಕೀಯ ತ್ಯಾಜ್ಯ ನಿರ್ವಾಹಣೆ ಕಾಯ್ದೆ ಸಮರ್ಪಕವಾಗಿ ಅನುಪಾಲನೆ ಮಾಡದೆ ಆಯುಷ್ ಪದ್ದತಿಯಲ್ಲಿ ನೋಂದಾಯಿಸಿ ಅಲೋಪಥಿ ಪದ್ಧತಿಯ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಹೀಗೆ ಹಲವು ಲೋಪ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಿಸುವಂತೆ ತಹಶೀಲ್ದಾರ್ ಶಿವಶಂಕರಪ್ಪ ಸೂಚಿಸಿದರು.
ಶಾಂತಿಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಾವ್ಯ ನೇತೃತ್ವದಲ್ಲಿ ಆಸ್ಪತ್ರೆ ತಾತ್ಕಾಲಿಕವಾಗಿ ಮುಚ್ಚಿಸಿ, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದರು.