ಹಾಸನ: ಹಾಸನ ತಾಲ್ಲೂಕಿನ ಹೆರಗು ಗ್ರಾಮ ಪಂಚಾಯಿತಿ ಎಚ್.ಭೈರಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅತ್ತೆ ಸೊಂಬಮ್ಮ ಅವರು ಮೂರು ಮತಗಳ ಅಂತರದಿಂದ ಸೊಸೆ ಪವಿತ್ರಾ ಅವರನ್ನು ಸೋಲಿಸಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಬೆಳಗೋಡು ಗ್ರಾಮ ಪಂಚಾಯಿತಿ ಬೆಳಗೋಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಾ ಮೀಸಲು ಕ್ಷೇತ್ರದಲ್ಲಿ ಒಂದು ಮತದಿಂದ ಸೋಲು ಕಂಡಿದ್ದು, ಇದೇ ಕ್ಷೇತ್ರದ ಸಾಮಾನ್ಯ ಅಭ್ಯರ್ಥಿಗಿಂತ ಹೆಚ್ಚು ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಹೆಚ್ಚು ಮತಗಳನ್ನು ಪಡೆದು ನಿಸಾರ್ ಅಹಮ್ಮದ್ ಗೆಲುವು ಸಾಧಿಸಿದ್ದರು. ಮೀಸಲು ಕ್ಷೇತ್ರದಲ್ಲಿ ಸೋಲುಂಡ ಅಭ್ಯರ್ಥಿ ಗಳಿಸಿದ ಮತ ಇದೇ ಕ್ಷೇತ್ರದ ಸಾಮಾನ್ಯ ಅಭ್ಯರ್ಥಿ ಗಳಿಸಿದ್ದ ಮತಕ್ಕಿಂತ ಹೆಚ್ಚು ಇದ್ದಿದ್ದರಿಂದ ಮಂಜುಳಾ ಗೆಲುವಿನ ಅದೃಷ್ಟ ಒಲಿಯಿತು.
ಬೆಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗಲಿ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ದೊಡ್ಡೀರಯ್ಯ ಗೆಲುವು ಸಾಧಿಸಿದರೆ, ಇವರ ಪುತ್ರ ಭುವನಾಕ್ಷ ಹೆಬ್ಬನಹಳ್ಳಿ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರ ಸೋದರ ಎಂ.ಎ.ನಾರಾಯಣಸ್ವಾಮಿ ಚನ್ನರಾಯಪಟ್ಟಣತಾಲ್ಲೂಕಿನ ಜಂಬೂರು ಕ್ಷೇತ್ರದಿಂದ ಜಯಗಳಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಕಡುವಿನಹೊಸಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಯಿ ಕುಮಾರಿ ಸೋಲಿನಿಂದ ಮನನೊಂದ ಮಗ ಅರುಣ್ ಆತ್ಮಹತ್ಯೆಗೆ ಯತ್ನಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳಮುಖಿಗೆ ಗೆಲುವು: ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಯ ರಾಜಾಪುರದ ಮತ ಕ್ಷೇತ್ರದಿಂದ ಮಂಗಳಮುಖಿ ಸುಧಾ ಗೆಲುವು ಸಾಧಿಸಿದ್ದಾರೆ. ಗ್ರಾಮ ಪಂಚಾಯ್ತಿ ಸ್ಥಾಪನೆಯಾಗಿ 26 ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಸುಧಾ ಗೆಲುವಿನ ನಗೆ ಬೀರಿದ್ದಾರೆ.