ಬುಧವಾರ, ಮಾರ್ಚ್ 29, 2023
27 °C
ಕನ್ನಡದ ಮೊದಲ ಶಿಲಾಶಾಸನ ದೊರೆತ ಗ್ರಾಮದ ದುಸ್ಥಿತಿ

ಹಾಸನ: ಹಲ್ಮಿಡಿಯಲ್ಲಿ ಅಭಿವೃದ್ಧಿ ಮರೀಚಿಕೆ

ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕನ್ನಡದ ಮೊದಲ ಶಿಲಾ ಶಾಸನ ದೊರೆತ ಬೇಲೂರು ತಾಲ್ಲೂಕಿನ ಕೊನೇ ಗ್ರಾಮ ‘ಹಲ್ಮಿಡಿ’ ಗ್ರಾಮದ ಅಭಿವೃದ್ಧಿ ಮರೀಚಿಕೆಯಾಗಿದೆ.

ತಾಲ್ಲೂಕು ಕೇಂದ್ರದಿಂದ ಕೇವಲ 16 ಕಿ.ಮೀ. ದೂರದಲ್ಲಿರುವ, ನಾರಾಯಣಪುರ ಪಂಚಾಯ್ತಿಗೆ ಸೇರಿದ ಗ್ರಾಮದಲ್ಲಿ 400 ಕುಟುಂಬ, 2 ಸಾವಿರ ಜನಸಂಖ್ಯೆ ಇದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೇ ಗುಂಡಿಮಯವಾಗಿದ್ದು, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ.

ಬೆಳಿಗ್ಗೆ ಮತ್ತು ಸಂಜೆ ಮಾತ್ರ ಸಾರಿಗೆ ಬಸ್‌ ವ್ಯವಸ್ಥೆ ಇದೆ. ಉಳಿದ ವೇಳೆ ಆಟೋರಿಕ್ಷಾದಲ್ಲಿ ದುಪ್ಪಟ್ಟು ಹಣ ನೀಡಿ ಜನ ಪ್ರಯಾಣಿಸುತ್ತಾರೆ. ಬೇಲೂರಿನ ನಿಲ್ದಾಣಕ್ಕೆ ಬಸ್‌ ಬಾರದಿದ್ದರೆ ಜನ ಚಿಕ್ಕಮಗಳೂರು ಬಸ್‌ನಲ್ಲಿ ಚನ್ನಪುರದವರೆಗೆ ಬಂದು ಅಲ್ಲಿಂದ ಮೂರು ಕಿಲೋ ಮೀಟರ್‌ ನಡೆದು ಗ್ರಾಮಕ್ಕೆ ಬರುತ್ತಾರೆ.

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಅಂಚೆ ಕಚೇರಿ, ಗ್ರಂಥಾಲಯ, ಬಯಲು ರಂಗ ಮಂದಿರವೂ ಇಲ್ಲ. ಸರ್ಕಾರಿ ಶಾಲೆಗೆ ಕಾಂಪೌಡ್‌ ಇಲ್ಲ. ನಿರ್ವಹಣೆ ಇಲ್ಲದೆ ಸಾಂಸ್ಕೃತಿಕ ಭವನ ಪಾಳು ಬಿದ್ದಿದೆ.

2016ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಹಲ್ಮಿಡಿ ಉತ್ಸವವನ್ನು ಆಚರಿಸಿದ ಬಳಿಕ ಕನ್ನಡ ಸಂಘ–ಸಂಸ್ಥೆಗಳು ಗ್ರಾಮವನ್ನು ಮರೆತುಬಿಟ್ಟಿವೆ. ಜಯಕರ್ನಾಟಕ ಸಂಘಟನೆಯು ಗ್ರಾಮಕ್ಕೆ ಸ್ವಾಗತ ಕಮಾನು ನಿರ್ಮಿಸಿಕೊಟ್ಟಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಭವನದಲ್ಲಿ ನೀರಿಲ್ಲದೆ ಶೌಚಗೃಹ ಬಂದ್‌ ಆಗಿದೆ. ಭವನದ ಕಿಟಕಿ ಗಾಜುಗಳು ಒಡೆದಿವೆ. ವರ್ಷಕ್ಕೆ ಒಂದೆರಡು ಕಾರ್ಯಕ್ರಮ ನಡೆದರೆ ಅದೇ ಹೆಚ್ಚು. 

‘ಹಲ್ಮಿಡಿ ಶಾಸನ ಗ್ರಾಮಾಭಿವೃದ್ಧಿ ಟ್ರಸ್ಟ್’ ರಾಜ್ಯೋತ್ಸವದಲ್ಲಿ ಮಾತ್ರ, ಶಾಸನದ ಪ್ರತಿಕೃತಿಯನ್ನು ಇರಿಸಲಾಗಿರುವ ಮಂಟಪದ ಆವರಣವನ್ನು ಸ್ವಚ್ಛಗೊಳಿಸಿ, ಶಾಲೆ ಮಕ್ಕಳೊಂದಿಗೆ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಮತ್ತೆ ಮಂಟಪದ ಕಡೆ ಜನ ಸುಳಿಯುವುದಿಲ್ಲ.

‘ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿಸಬೇಕು. ಶಾಸನದ ಪ್ರತಿರೂಪ ಮಂಟಪದ ನಿರ್ವಹಣೆಗೆ ನೀಲಿನಕ್ಷೆ ಸಿದ್ಧಗೊಳ್ಳಬೇಕು. ಜನಪ್ರತಿನಿಧಿಗಳು ನೀಡಿದ ಯಾವ ಭರವಸೆಯೂ ಈಡೇರಿಲ್ಲ’ ಎಂದು ಟ್ರಸ್ಟ್‌ ಸದಸ್ಯ ಗುರುಸಿದ್ದೇಗೌಡ ಬೇಸರ ವ್ಯಕ್ತಪಡಿಸಿದರು.

‘ಯಗಚಿ ನದಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸಬಹುದಾದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ. ವಾರದಲ್ಲಿ ಎರಡು ಬಾರಿ ಕೊಳವೆ ಬಾವಿ ನೀರು ಪೂರೈಸಲಾಗುತ್ತದೆ’ ಎಂದು ಹಲ್ಮಿಡಿ ನಿವಾಸಿ ಈಶ್ವರ್‌ ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು